Wednesday, December 3, 2014

ನಮ್ಮ ನಂಬಿಕೆಗಳು......

             

         ಬಾಳಿಗೊಂದು ನಂಬಿಕೆ ಎಂಬಂತೆ, ಈ ಬಾಹ್ಯ ಜಗತ್ತು ನಂಬಿಕೆಯ ತಲೆದಿಂಬುನಿಟ್ಟು ಮಲಗಿದೆ. ಈ ನಂಬಿಕೆಯಲ್ಲಿ ಎಲ್ಲವೂ ಶೂನ್ಯ ಆಕಾಶ ಅನಂತವಾದರೆ, ಅಣು ಪರಮಾಣುಗಳು ಎನೋ ಕತ್ತಲಲ್ಲಿ ತೇಲುವ ಸೂಕ್ಷ್ಮ ಜೀವಿ, ಆ ಆಗಾಧ ಶಕ್ತಿಯ ಕೊಲ್ಮಿಂಚು ಎಲ್ಲೋ ಹುಟ್ಟಿ ಶಕ್ತಿಯ ಅದುಮಿದ ಶೂನ್ಯ, ಸತ್ಯದ ಜಗದಲ್ಲಿ ನಾವೊಂದು ಭ್ರಾಮರಕ ನಿರ್ಮಿತಿಗಳು ಅದೇ ನಿರಾಕಾರ, ನಿರ್ಗುಣ, ನಿರಾಮಯ, ಆಗೋಚರ ಬ್ರಹ್ಮಾಂಡದ ಸ್ವರೂಪಗಳು ನಮ್ಮ ಜ್ಞಾನದ ಅಳತೆಯೊಳಗೆ.... "ನೈಜ ಜಗತ್ತಿನಲ್ಲಿ ಬಣ್ಣಗಳೇ ಇಲ್ಲ, ವಾಸನೆಯೂ ಇಲ್ಲ, ಮೃದುತ್ವ ಕಾಠೀಣ್ಯಗಳು ಇಲ್ಲವೇ ಇಲ್ಲ, ಅವೆಲ್ಲ ಏನಿದ್ದರೂ ನಮ್ಮ ನಿಮ್ಮ ಮಿದುಳಿನಲ್ಲಿ ನಮ್ಮ ನಿಮ್ಮ ಜ್ಞಾನದಲ್ಲಿ" ಎಂದು ಪ್ರಸಿದ್ಧ ನರ ವಿಜ್ಞಾನಿ ನೋಬೆಲ್ ವಿಜೇತ ಸರ್ ಜಾನ್ ಐಕೆಲ್ಸ್ ಹೇಳಿದ್ದಾರೆ. ನಮ್ಮ ಯೋಚನಲಹರಿಯ ಶೂನ್ಯ ಜಾಗಗಳಲ್ಲಿ ಈ ನಂಬಿಕೆಗಳು ಅಚ್ಚಳಿದು ನಿಂತಿದೆ ನಮ್ಮ ನಂಬಿಕೆಗಳೇ ಹಾಗೆ ಅದು ಪ್ರಕೃತಿಯ ಅರಾಧನೆಯಿಂದ ಹಿಡಿದು ಗುರು ಹಿರಿಯರ ಪೂಜನೆಯವರೆಗೆ ಅದರಲ್ಲೂ ಕರಾವಳಿ ಇವೂಗಳ ಗೂಡು, ಬೀಡು. ಹಲವಾರು ವೈಶಿಷ್ಟ, ವಿಶೇಷ, ಆಚರಣೆ, ಅರಾಧನೆ, ಪಾಲನೆ ಇವುಗಳಿಂದಾಗಿ ವಿಶ್ವವ್ಯಾಪ್ತಿಯಲ್ಲಿ ಛಾಪನ್ನು ಮೂಡಿಸಿದೆ.  ಎಲ್ಲರ ಮಂದ ದೃಷ್ಠಿ ಇತ್ತ ಕಡೆ ನೆಡುವಂತೆ ಮಾಡಿದೆ. ಇಲ್ಲಿನ ಆಚರಣೆ ಒಂದನ್ನು ಮೀರಿಸುವ ಇನ್ನೊಂದು ಪ್ರಬುದ್ಧವಾದದ್ದು. ಪ್ರಪಂಚದ ಬೇರೆ ಯಾವೂದೇ ಕೋಣೆಯಲ್ಲೂ ಅರಸಿ ಹುಡುಕಿದರೂ ಬಯಸಿ ಸಿಗಲಾರದು. ಯಾವುದೋ ಪೂವಾಗ್ರಹದ ನೆಲೆಯಲ್ಲಿ ತುಳುನಾಡು ತನ್ನ ಭವ್ಯ ಸಂಸ್ಕøತಿಯ ಕಣಜದ ನೆಲೆಯಲ್ಲಿ ಇನ್ನೂ ಆಚರಣೆಗಳು ಉಳಿದು ನಡೆಯುತಿದೆ. ಒಂದಷ್ಟು ಜಿಜ್ಞಾಸೆ ವಿಮರ್ಶೆಗಳಿಂದ ಮತ್ತಷ್ಟು ಪ್ರಚಾರವಾಗಿ ಇನ್ನಷ್ಟು ಗಟ್ಟಿಯಾಗಿ ತುಳುವರ ಮನಗಳಲ್ಲಿ, ಮನೆಗಳಲ್ಲಿ  ಅಗೆಲುಗಳ ರೂಪದಲ್ಲಿ ಭಾವುಕವಾಗಿ ಬೆಚ್ಚಗೆ ಕುಳಿತಿದೆ.
              ಸಂಸ್ಕೃತಿ, ಸುಸಂಸ್ಕೃತ  ಪದಗಳು ಇಂದು ನಿರ್ಜೀವ ವಸ್ತುವಂತೆ ಎಲ್ಲ್ರ ಬಾಯಲ್ಲೂ ಹೊರಲಾಡಿ ತನ್ನ ನೈಜತೆ ಯನ್ನು ಕಳಕೊಂಡಿದೆಯೇ ಹೊರತು ವಾಸ್ತವದಿಂದಲ್ಲ. ಅದರಲ್ಲೂ ಕರಾವಳಿಯ ದೇವರ ಕಾಡು, ನಾಗಬನ, ದೇವರಕೆರೆ, ಪುಣ್ಯ ನೀರು ಸ್ನಾನ, ಭೂತಕೋಲ, ಒತ್ತೆಕೋಲ, ಅಗೆಲು ಹಾಕುವುದು, ಬಿಂದು ಕೊಡುವುದು, ಪಿಂಡ ಬಿಡುವುದು, ಕುಲೆಗಳಿಗೆ ಬಡಿಸುವುದು, ಮಡೆಸ್ನಾನ, ಬೂಡು, ಗರೋಡಿ, ನಾಗತಂಬಿಲ, ಪತ್ತನಾಜೆ, ಆಟಿ ಆಚರಣೆ, ಕೋಲ, ಕೆಡ್ಡಸ,  ಹೀಗೆ ಪಂಚ ಭೂತಗಳಾದ ಪೃಥ್ವಿ ,ಅಪ್ಪು, ತೇಜಸ್ಸು ,ವಾಯು , ಆಕಾಶ ಆಕಾಶಗಳನ್ನು ಒಂದೊಂದು ವಿಧದಲ್ಲಿ ಆಕಾರಗಳಲ್ಲಿ ಪೂಜಿಸಿ ಸಂಪನ್ನಗೊಳಿಸಿ, ಸಮೃದ್ಧಿಯ ಕಾಣುವ ನಾಡು ತುಳುನಾಡು. ಎಲ್ಲವೂ ಪ್ರಬುದ್ಧವಲ್ಲದಿದ್ದರೂ ಅವುಗಳಿಗೆ ಅದರದೇ ಅದ ಕಟ್ಟಲೆ, ಹಿನ್ನೆಲೆಗಳನ್ನು ಆನಾದಿ ಕಾಲದಿಂದ ಹಲವಾರು ತಲೆಮಾರುಗಳಿಂದ ಅಜ್ಜ ನೆಟ್ಟ ಆಲದ ಮರದಂತೆ ಜೋಪಾನವಾಗಿ ಗಂಟುಕಟ್ಟಿ ದಾಟಿಸುತ್ತಿದ್ದಾರೆ. ಸಮಾಜಕ್ಕೆ ಪ್ರೇರಣೆ ನೀಡುವವರು ಮಾಹಾಪುರುಷರು ಈಲೋಕ ಬಿಟ್ಟು ತೆರಳಿದೊಡನೆ ಹಿಂದಿರುವ ಜನರು ಅವರು ಹೇಳಿದ ಮಾರ್ಗದಲ್ಲಿ ನಡೆಯುತ್ತಾ ಅವರ ಜನ್ಮಸ್ಥಳ, ಮರಣಸ್ಥಳಗಳನ್ನೂ ಪೂಜಿಸಿ ಮೊದಲು ಸ್ಮರಣೆಯಾಗಿ ಕಾಲಾಂತರದಲ್ಲಿ ಭ್ರಮೆಯಾಗುತಿದೆ. ಇದಕ್ಕೆ ಉದಾಹರಣೆಯೆಂಬಂತೆ ವೀರ ಪುರುಷರುಗಳಾದ ಕೋಟಿ- ಚೆನ್ನಯ, ಆಗೋಲಿ ಮಂಜಣ್ಣ, ಕಾಂತಬಾರೆ- ಬುದಬಾರೆಯವರ ಸಂಧಿ ಪದಗಳು ,ಕಥೆಗಳು , ಗರೋಡಿಗಳು ಜನ ಮಾನಸದಲ್ಲಿ ಇಂದು ಜನಜನಿತವಾಗಿದೆ. ಇಲ್ಲಿನ ನಾಗಾರಾಧನೆ, ಭೂತರಾಧನೆ ಅದೆಷ್ಟೋ ಕಾಂಕ್ರೀಟುಕರಣದ ನಡುವೆಯು ಏಕರೆಯಷ್ಟು ನೆಲ ಖಾಲಿಯಾಗಿ ಉಳಿದು ಮಣ್ಣಿನ ಪರಿಮಳ ಉಳಿಸಲು ಸಾಧ್ಯವಾಗಿದೆ. ಪ್ರತಿಷ್ಠಿತ ವಿದ್ಯಾ ಸಂಸ್ಥೆ, ಆಸ್ಪತ್ರೆ, ಮಾಲ್ಗಳ ಅವರಣದೊಳಗೂ ನಾಗಾರಾಧನೆ, ಭೂತರಾಧನೆಯ ಗುಡಿಗಳನ್ನು  ಕಾಣಬಹುದು ಎಂದರೆ ಈ ತುಳುವರು ಎಲ್ಲಾ ಕ್ಷೇತ್ರಗಳಲ್ಲೂ ಮುಂದುವರಿಯಲೂ ಆ ಆರಾಧನೆಯೇ ಪ್ರೇರಣಾ ಜ್ಯೋತಿ ಎಂಬಂತೇ.....

                ಹೌದು ನಾನು ಕಂಡಂತೆ ಪುತ್ತೂರು ಸಮೀಪದ ಕುಂಟಿಕಾನ ಎಂಬಲ್ಲಿ ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ರಬ್ಬರ್ ಸಸಿ ನೆಡುವ ಭರದಲ್ಲಿ ನೂರಾರು ಹೆಕ್ಟೇರ್ನಲ್ಲಿದ್ದ ಹಸಿರಿನ ಮೇಲೆ ಬುಲ್ಡೋಜ್ಹರ್ ಹರಿಸಿತ್ತು ಆದರೆ ಜನರ ನಂಬಿಕೆಯ ನಾಗಬನಗಳನ್ನು ಮಾತ್ರ ಯಂತ್ರಗಳು ಮುಟ್ಟಲಿಲ್ಲ . ಹೌದು, ಯಾವುದೋ ನಂಬಿಕೆಯ ಮೂಲದಿಂದ ಅರ್ಧ ಎಕರೆ ಕಾಡು ಪ್ರಸಾದ ರೂಪದಲ್ಲಿ ತನ್ನ ಇರುವಿಕೆಯನ್ನು "ನಾಗಬನ", "ದೇವರ ಕಾಡು"  ಎಂಬ ಸ್ಧಿತಿಯಲ್ಲಿ ಉಳಿಯುವಂತಾಯಿತು.

                 ತುಳುನಾಡ ದೈವರಾಧನೆಯ ಸುಸಂದರ್ಭದಲ್ಲಿ ದೈವ ಆಭಯ ಕೋಡುವುದೇ ಹಾಗೆ "ನಂಬಿನಕ್ಲೆಗ್ ಇಂಬು ಕೊರ್ಪೆ, ಪೇದಿ ಅಪ್ಪೆಗ್ ಸರಿಯಾದ್ , ತಾಂಕಿ ತಮ್ಮಲೆಗ್ ಸರಿಯಾದ್, ಸೂಜಿತ ಬೇರಿಯೇ ನೂಲು ಬತ್ತಿಲೇಕ ಪೆತ್ತದ ಬೇರಿಯೇ ಕಂಜಿ ಬತ್ತಿಲೇಕೋ , ಕೆಂಡತ ಬರ್ಸೋಗು ಕರ್ಬೋತ ಬೆಲಿಯಾತ್ ಕಾತ್ಹೊಂತ್ ಬರ್ಪೆ ನಮ್ಬೋನ್ಲೆ....  ನಮ್ಬೋನ್ಲೆ...  ನಮ್ಬೋನ್ಲೆ......    "(ನಂಬಿದವರಿಗೆ ರಕ್ಷಣೆ ಕೊಡುತ್ತೇನೆ, ಹೆತ್ತ ತಾಯಿಗೆ ಸಮನಾಗಿ , ಸಾಕಿದ ಮಾವನಿಗೆ ಸಮನಾಗಿ , ಸೂಜಿಯ ಹಿಂದೆ ನೂಲು ಬರುವಂತೆ, ದನದ ಹಿಂದೆ ಕರು ಬರುವಂತೆ, ಬೆಂಕಿಯ ಮಳೆಗೆ ಕಬ್ಬಿಣದ ಬೇಲಿಯಾಗಿ ರಕ್ಷಣೆ ಮಾಡುತ್ತೇನೆ ನನ್ನನ್ನು ನಂಬಿ) ಎಂದು... ನಂಬಿದವರ ರಕ್ಷಿಸಿಸುವ ಕೆಲಸ, ನಂಬಿಕೆ, ವಿಶ್ವಾಸದ ಪ್ರಶ್ನೆ ಬಂದಾಗ ಈ ದೈವ-ಭೂತಗಳಿಗೆ ಮೊದಲ ಪ್ರಾಶಸ್ತ್ಯ. ದೈವಗಳಿಗೆ ಪ್ರಕೃತಿ ಪೂಜಾಕರಾದ ನಾವು ಪ್ರಾಣಿರೂಪವಾಗಿ, ದೈವೀರೂಪವಾಗಿ, ಪುರಾಣರೂಪಗಳಲ್ಲಿ ದೈವಾರಾಧನೆ ಮಾಡುತ್ತಾ ಬಂದು ನಮ್ಮ ಮತ್ತು ದೇವರು ಇವುಗಳ ನಡುವೆ ರಾಯಭಾರಿಯಾಗಿ, ಸಂವಹನಕಾರರಾಗಿ ಸಮಾಜವನ್ನು ಸಮರ್ಥವಾಗಿ ನಿಯಂತ್ರಿಸುವ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಿವೆ. ಭೂತಾರಾಧನೆ ಆಧ್ಯಾತ್ಮಿಕ ಶಕ್ತಿಯ ಆರಾಧನೆ ಅಗಿರಬಹುದು ಅವುಗಳೆಲ್ಲವೂ ನಿಮಿತ್ತ ಮಾತ್ರ ತುಳುವರ ದೃಷ್ಠಿಯಲ್ಲಿ ಅದು ದಿವ್ಯ ಸೃಷ್ಠಿಗಳು ಮಾನವ ಜೀವಿಗಳ ಶ್ರೇಷ್ಟತೆಯ ಪೂರ್ಣತೆಗೆ ಅರ್ಥಕೊಡುವ ಶಕ್ತಿಗಳು......

                ಇನ್ನೂ ನಮ್ಮ ಯಕ್ಷಗಾನ, ಬಯಲಾಟಗಳ ಕಡೆಗೆ ಹೊರಟರೆ ಅದರ ಬಗೆಗಿಟ್ಟಿರುವ ನಂಬಿಕೆ ಆಚಲ, ಧರ್ಮದಾಟ, ಸೇವೆದಾಟ, ಹೀಗೆ ಹಲವಾರು ಕಾರಣಗಳಿಂದ ಹಲವಾರು ಕ್ಷೇತ್ರ,  ಮೇಳಗಳು ಹುಟ್ಟಿ ಬೆಳೆದು ಪಸರಿಸುತ್ತಿದೆ. ಆಟ(ಯಕ್ಷಗಾನ)ದಲ್ಲಿ ಮಾನವರು ದೇವತೆಗಳಾಗಿ, ಗಣಗಳಾಗಿ , ರಾಕ್ಷಸರಾಗಿ ಮಾನವ ನಿಮಿತ್ತರೂ ದೇವ ದೇವಾತ್ಮಾ ಸಂಭೂತನಾಗುವುದು ಇಲ್ಲಿ(ತುಳುನಾಡಲ್ಲಿ) ಮಾತ್ರ ಕಾಣಬಹುದು. 
                ಶ್ರಾದ್ಧ ಕಾರ್ಯಕ್ರಮ, ಅಗೆಲು ಹಾಕುವುದು, ಕುಲೆಗಳಿಗೆ ಬಡಿಸುವುದು, ಗುರುಕಾರ್ಣವರಿಗೆ ಬಡಿಸುವುದು, ಹೀಗೆ ಇಲ್ಲಿ ಪ್ರತಿ ಮನೆ , ಮನ ಎಂಬಂತೆ ನಮ್ಮನ್ನು ಬಿಟ್ಟು ಯಾವುದೋ ಸ್ತಬ್ಧ ಸುಂದರ ಲೋಕಕ್ಕೆ ಮತ್ತೆ ಜೀವಿಸಲು, ವಿಹರಿಸಲು, ತೆರಳಿರುವ ಗುರುಹಿರಿಯರನ್ನು ನೆನಪಿಸಿಕೊಳ್ಳುವುದು ಮಾತ್ರ ನಿಜಕ್ಕೂ ಗುರುಹಿರಿಯರ ಬಗೆಗಿನ ಗೌರವ ಹೆಚ್ಚಿಸಿದೆ....ಇನ್ನೂ ವಿಜ್ಞಾನಕ್ಕೆ ಪುಷ್ಟಿ ನೀಡುವಂತೆ ಬಾಲೆ ಮತ್ತು ಮೂಗುಡು ಮೀನುಗಳನ್ನು , ಬಸಳೆ ಮತ್ತು ಹರಿವೆಯನ್ನು ಒಂದೇ ನೆಸಲೆಯಲ್ಲಿ ಹಾಕಿ ಬೇಯಿಸುವುದಿಲ್ಲ , ಬೇಯಿಸಿದರೆ ಪಾತ್ರೆಯಲ್ಲಿ ರಕ್ತ ಕಾಣುತ್ತದೆಯೆಂದು , ಮೂಲದಲ್ಲಿ ಇದೊಂದು ಅಜ್ಜಿ ಕತೆಯಂತೆ ಕಂಡರೂ ಅದು ಅಣ್ಣ ತಂಗಿಯ ಲೈಂಗಿಕ ಸಂಬಂಧದ ನಿಷೇಧದ ಕುರಿತಾಗಿದೆ. ರಾತ್ರಿ ತಿಮರೆ (ಒಂದೆಲಗ ) ಚಟ್ನಿ , ಬಾಳೆಕಾಯಿ ಪದಾರ್ಥ ತಿನ್ನುವುದಕ್ಕೆ , ಕತ್ತಲಾಗುತಿದ್ದಂತೆ ಬಟ್ಟೆ ಒಗೆಯುವುದು, ಬಟ್ಟೆ ಹೊಲಿಯುವುದು , ರಾತ್ರಿ ಉಗುರು ಕತ್ತರಿಸುವುದು ಹೀಗೆ ಹಲವಾರು ಕೆಲವು ಮಾನವನ ಅಂತರಿಕ ಹಾಗೂ ಬಾಹ್ಯ ಆರೋಗ್ಯದ ರಕ್ಷಣಾ ಕವಚಗಳಾಗಿ.... 

               ಇತ್ತಿಚೇಗೆ ರಾಜ್ಯದೆಲ್ಲೆಡೆ ಕರಾವಳಿಗರ ಬಗೆಗೆ ಇನ್ನೂ ಹೊತ್ತಿ ಉರಿದು ಗಾಳಿಯ ದೆಸೆಗೆ ಬೂದಿ ಹಾರುವಂತೆ ಮಡೆಸ್ನಾನ ಬಗೆಗಿನ ನಂಬಿಕೆ ವಿಮರ್ಶೆ ಮಾಡಿ ಹೊಲಸು ಬಾಯಿ ಮತ್ತು ಸಪ್ತವ್ಯಸನವಿರುವ ಜನ ನುಡಿಮುತ್ತು ಉದುರಿಸಿದ್ದು ಮಾತ್ರ ಖೇದಕರ....
              ಹೌದು ಇಂದಿನ ಆಧುನಿಕ ಭರಾಟೆಯಯಲ್ಲಿ ಸಂಸ್ಕøತಿ ಕಾಲದಿಂದ  ಕಾಲಕ್ಕೆ ಬೆಳೆದ ನಮ್ಮ ಜ್ಞಾನದ ದೆಸೆಯ ನೆಲೆಯಲ್ಲಿ ವಿಜ್ಞಾನಿ ಸುಜ್ಞಾನಿಯೆಂಬ ಸಹಜಪೂರಕ ಬದಲಾವಣೆ ಕಂಡು  ಆಚರಣೆ, ಅರಾಧನೆ, ಪಾಲನೆ, ನಂಬಿಕೆಗಳು ಒಬ್ಬ ಹಳ್ಳಿಯವನದ್ದು, ಅವು ಎಲ್ಲವೂ ಮೂಢತೆ, ಮೌಢ್ಯ ಎಂದು ಕರೆಯುತ್ತೇವೆ ಅದರ ಹಿಂದಿನ ಹಿನ್ನಲೆಯು ಭ್ರಮೆ ಎನ್ನುತ್ತೇವೆ. ಕೆಲವು ಕಡೆ ವಿಜ್ಞಾನದ ಭೌತವಿಜ್ಞಾನವೂ ಭ್ರಮೆಯ(Imagination) ಮೇಲೆ ನಿಂತಂತೆ ಕಣ್ಣಿಗೆ ಕಾಣದ ಎಲೆಕ್ಟ್ರಾನ್, ನ್ಯುಟ್ರೋನ್  ಅವು ಸುತ್ತುತ್ತವೆ, ತಿರುಗುತ್ತವೆ ಎಂದು ಅಂಗೀಕರಿಸುವ ನಾವು ಆಚರಣೆಗೆ ಬಂದರೆ ಕೀಳಾಗಿ ಕಾಣಲು ಈ ವಿಜ್ಞಾನದ ಕಣ್ಣು ಎಂದು ಹೇಳಬಹುದೆನೋ....! ವಿಜ್ಞಾನದ ಸಂಕೇತ, ಚಿಹ್ನೆ, ನೆರಳು, BIS,  ಮಾರ್ಕುಗಳಿಲ್ಲದಿದ್ದರೆ ಕೆಲವು ಅಸ್ತಿಕ-ನಾಸ್ತಿಕರು ಒಪ್ಪುವುದೇ ಇಲ್ಲ.. ಗೊಂದಲದಿಂದ ಬುದ್ಧಿಸ್ಥಿಮೀತವಿಲ್ಲದೇ ಕಂಡ ಪ್ರತಿಯೊಂದಕ್ಕೂ ಶಕುನ-ಅಪಶಕುನಗಳಂತೆ ವೈಜ್ಞಾನಿಕ ವಿವರಣೆ ನೀಡುತ್ತಾ ತಮ್ಮ ಚಾಪಲ್ಯ ತೀರಿಸುತ್ತಿರುವುದು ಮಾತ್ರ ನಂಬುತ್ತಿರುವ ನನ್ನಂತಹವರಿಗೆ ಸಣ್ಣ ಹೊಡೆತ ಮಾತ್ರ ಸತ್ಯ.

              ಒಂದಂತು ನಿಜ ಪ್ರಾಂಪಂಚಿಕ ನಾಗರಿಕತೆಗೆ ವಿರೋಧವಾಗಿ ಮಾತಾನಾಡಿ ಪ್ರಚಾರಗಿಟ್ಟಿಸುವ ದಿನಗಳಲ್ಲಿ ಈ ನಂಬಿಕೆಗಳ ಮೇಲೆ ನಿಂತ ಸ್ವರ್ಗ-ನರಕಗಳಿಂದಾಗಿ ಮಾನವ ದಾನವನಾಗುವುದನ್ನು ತಪ್ಪಿಸಿದೆ ಎಂಬುವುದರಲ್ಲಿ ಎರಡು ಮಾತಿಲ್ಲ. ನಿಮಗೂ ಗೊತ್ತು ವಿಜ್ಞಾನಸೃಷ್ಠಿಯ ಕನ್ನಡಿ ಕವಿ ಬಾಯಲ್ಲಿ ಅದು ಸತ್ಯ..!! ಅದು ಹೇಳುವುದೆಲ್ಲ ಸತ್ಯವೇ ಅದರೆ ಅದು ಸುಳ್ಳು.. ಅದು ನಮ್ಮ ಭ್ರಮೆ.. ಅದು ನೀಡುವುದು ಮಿಥ್ಯ ಬಿಂಬ ಅಂದರೆ ಉಲ್ಟಾಪಲ್ಟಾ ಬಿಂಬ ನಿಜ ಅದಾಗ್ಯೂ ಅದು ನಮ್ಮ ಮೊಗದ ಕುಳಿಗೆ ಕಾರಣವಾದ ಖುಷಿಯ ಸಂಗತಿ ತಿಳಿಸದು. ಕಣ್ಣೀರ ಕಂಡರೂ ಅದಕ್ಕೆ ಕಾರಣವಾದ ನೋವು ಕಾಣಿಸದು ಅದರಂತೆ ಈ ನಂಬಿಕೆ ಸಹ.....
                 ಆಚರಣೆ, ನಂಬಿಕೆಗಳನ್ನು ಮಾಡುವವರನ್ನು ಬುದ್ಧಿಹೀನರೂ ಮೌಢ್ಯರೂ ಎಂದು ಏಲ್ಲೆಲ್ಲೂ ಛೇಡಿಸಿ ಧಾರ್ಮಿಕಭಾವನೆಗಳಿಗೂ ಧಕ್ಕೆ ತರಲೂ ಗಾಂಧೀ ಯುಗದಲ್ಲಿ ಇವುಗಳ ಮೇಲೆ ಆದ ಪಾಶ್ಚಾತ್ಯರ ದಬ್ಬಾಳಿಕೆ ಏನೋ ಅದರ ನೆರಳು ಈಗಳು ಬೀಳುತಿರುವುದು ವಿಪರ್ಯಾಸ...!! ಬುದ್ಧಿಗೆ ನಿಲುಕದ ಕೆಲವು ಗುಣ ವಿಶೇಷಗಳಿಗೆ ವಿದ್ಯಾವಂತನೆಂಬ ನೆಲೆಯಲ್ಲಿ ಚಿಪ್ಪಿನೊಳಗೆ ತಪಸ್ಸಿಗೆ ಕುಳಿತ ಮೆದುಳಿನ ರೇಖಾಗೆರೆಗೆ ವೇಗ ಕೊಟ್ಟಂತೆ ಇಂದ್ರಿಯಲಾಲಸೆಯ ಪ್ರಪಂಚದಲ್ಲಿ ಇಂದ್ರಿಯಗಳನ್ನೇ ಕೊಂಕಿಸಿ ತರ್ಕಿಸಿ ತುರ್ಕಿಸಿ ವಿವರಣೆ ನೀಡುತಿರುವುದು ಧಾರ್ಮಿಕ ವೈರಾಗ್ಯದ ಕಡೆಗೆ ಸಾಗುತ್ತಿರುವ ಕುರುಹೋ ಏನೋ ಎಂಬಂತೆ ಭಾಸವಾಗುವುದರಲ್ಲಿ ತಪ್ಪೆನಿಲ್ಲ...ನಂಬಿಕೆಗಳು ನಂಬುವವರ ಮನೊಭೂಮಿಕೆಯ ಚೌಕಟ್ಟಿನೊಳಗೆ ಓಡಾಡುತ್ತಿರುತ್ತವೆ, ಮಿತಿಯಿಂದ ಚಿತ್ರಿಸಿ ಕಲ್ಪಿಸಿಕೊಳ್ಳುತ್ತದೆ, ನಂಬಿಕೆ ದುರ್ಬಲತೆಯ ಮನ ಹೊಕ್ಕುವುದು ಮಾತ್ರ ನಿಜ ಆತ್ಮವಿಶ್ವಾಸದ ಶಕ್ತಿ ಗುಳಿಗೆಯಾಗಿ ಪರಿಣಾಮಕಾರಿಯಾಗುವುದು ಕಾಲಸಹಜವಾಗಿ ಕಾಯಿ ಹಣ್ಣುವಷ್ಟು ನಿಜ. ಈ ನಂಬಿಕೆಯು ಚೌಕಟ್ಟಿನೊರಗೆ ಅಂದರೆ ಸೀಮಾ ಗಡಿಮೀರಿದರೆ ಅದು ಅಸ್ತಿಕತೆಯಿಂದ ನಾಸ್ತಿಕತೆಗೆ ಹೋಗುವ ದಾರಿಯಂತೆ...  "ಅತ್ತ ಇಲಿ ಇತ್ತ ಹುಲಿ" ಎಂಬಂತೆ ಇಬ್ಬದಿಯ ನೀತಿಯ ಬಗೆಗೆ ಕಗ್ಗದಲ್ಲಿ ಡಿ.ವಿ.ಜಿಯವರು
"ನಂಬದಿರ್ದನು ತಂದೆ,ನಂಬಿದನು ಪ್ರಹ್ಲಾದ |
ನಂಬಿಯುಂ ನಂಬದಿರುವುಬ್ಬಂದಿ ನೀನು ||
ಕಂಬದಿನೊ, ಬಿಂಬದಿನೊ ಮೋಕ್ಷವವರಿಂಗಾಯ್ತು |
ಸಿಂಬಳದಿ ನೊಣ ನೀನು - ಮಂಕುತಿಮ್ಮ ||"
ಅಂದರೆ ದೈವವನ್ನು ನಂಬಿದವನು ಪ್ರಹ್ಲಾದ ,ಅದನ್ನು ನಂಬದವನು ಅವನ ತಂದೆ ಹಿರಣ್ಯ ಕಶ್ಯಪ . ಮಗನ ಭಕ್ತಿಯನ್ನು ತಂದೆ ಪರೀಕ್ಷಿಸುವ ಸಂದರ್ಭದಲ್ಲಿ ದೈವವೂ ನರಸಿಂಹನ ರೂಪದಲ್ಲಿ ಕಂಬವನ್ನು ಬಿರಿದುಕೊಂಡು ಹೊರಗೆ ಬಂದಿತ್ತು, ನಂಬಿದ್ದ ದೈವವನ್ನು ಕಂಡು ಪ್ರಹ್ಲಾದನಿಗೆ ಮುಕ್ತಿಯಾಯಿತು ಅದುವರೆಗೆ ನಂಬದಿದ್ದ ದೈವವನ್ನು ಆಗಅದು ತೀವ್ರ ಶ್ರದ್ಧೆ,  ಕಂಬದಲ್ಲಿ ಕಂಡು ಹಿರಣ್ಯ ಕಶ್ಯಪನಿಗೂ ಮುಕ್ತಿಯಾಯಿತು. ಅಸ್ತಿಕತೆಯಾಗಲಿ ನಾಸ್ತಿಕತೆಯಾಗಲಿ ಅಚಲ ನಂಬಿಕೆವುಳ್ಳದಾದರೆ ಅದು ಫಲ ಕೊಟ್ಟಿತೂ .. ಅರೆಮನಸಿನ ಮತ ನಿಷ್ಫಲ ಎಂಬುವುದು ಇದರ ಗೂಡರ್ಥ.  
              ಖಂಡಿತ, ನಂಬಿಕೆಗಳು ಮೂಡತೆಯಲ್ಲ ಒಂದಷ್ಟು ಹಿನ್ನಲೆ, ಇತಿಹಾಸ, ಉದ್ದೇಶ, ಸಾರ್ಥಕತೆ, ಶಾಂತಿ, ನೆಮ್ಮದಿಯ ವಿಚಾರ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಪೂಜೆ, ಪುನಸ್ಕಾರ, ಆರಾಧನೆ, ಆಚರಣೆ ಮನಸ್ಸಿಗೆ - ಅಧ್ಯಾತ್ಮಕ್ಕೆ ಸಂಬಂಧಿಸಿದ ವಿಚಾರಗಳು. ವ್ಯಕ್ತಿಯ ಪರಿಪೂರ್ಣ ಸಮತೋಲಿತ ಆರೋಗ್ಯಕ್ಕೆ ದೇಹ ಮತ್ತು ಮಾನಸಿಕ ಅರೋಗ್ಯ ಅವಶ್ಯ ದೇಹದ ಆರೋಗ್ಯಕ್ಕೆ ವೈದ್ಯರ ಔಷಧಿ ಹೇಗೆ ಅವಶ್ಯವೋ  ಅದೇ ರೀತಿ ಮನಸ್ಸಿನ ಆರೋಗ್ಯದ ಸಂತುಲಿತಕ್ಕೆ ಮೇಲಿನವೆಲ್ಲಾ ಅವಶ್ಯ. ನಮ್ಮ ಅಪ್ರಬುದ್ಧ ಪೂರ್ವಾಗ್ರಹ ಪೀಡಿತ ಮನೋಧರ್ಮವೂ ಜಾನಪದ, ಅಧ್ಯಾತ್ಮಿಕ ಜಗತ್ತಿನ ಅಮೂಲ್ಯ ಸಂಗತಿಗಳನ್ನು ಟೀಕಿಸುತ್ತಾ, ಅಲ್ಲಗಳೆಯುತ್ತಾ, ಪ್ರಶ್ನಿಸುತ್ತಾ, ನಕಾರಾತ್ಮಕವಾಗಿ ಚಿಂತಿಸುತ್ತಾ, ನಿರಾಕರಿಸುತ್ತಾ ಹೋದರೆ ಯಾರ್ಯಾರಿಗೋ ನಷ್ಟವಲ್ಲ ಅದು ನಮ್ಮ ಸ್ವಂತ ನಷ್ಟ ಅಷ್ಟೇ...!!  ಮುಖಕ್ಕೆ ಈಟಿಯೇ ಚುಚ್ಚಿಸಿ ದೇಹ ದಂಡಿಸುವುದೆ ಆಗಿರಬಹುದು ಅದರೆ ಅದು ಪ್ರಸವವೇದನೆಯ ಸಂತೋಷ, ಶಾಂತಿಯನ್ನು ಅದರ ಅನುಭವಿಸಿರುವರಿಂದ ಪಡೆಯುವುದು ಸೂಕ್ತ. ಈ ನಂಬಿಕೆ ಸಾಪೇಕ್ಷ ಸ್ಥಿತಿಸ್ಥಾಪಕ(CONSTANT)ದಂತೆ, ನಮ್ಮ ಮನೆಯ ನೆಮ್ಮದಿ, ಹರಿಯುವ ನೀರಿನಲ್ಲಿ, ಚಲಿಸುವ ಗಾಳಿಯ ನೆಮ್ಮದಿಯಾಗಬೇಕಿಲ್ಲ ಪ್ರಕೃತಿಯ ಸ್ಥಿತಿ ಹೇಗಿದೆ ಎಂಬುವುದನ್ನು ಅನುಭವಗಳ ಮೂಲಕ, ನಂಬಿಕೆಗಳ ಮೂಲಕ ಒಪ್ಪಿಕೊಂಡು ಅದಕ್ಕನುಸಾರವಾಗಿ ಬದುಕಬೇಕಾಗುತ್ತದೆ ಎಲ್ಲಾವುದಕ್ಕೂ ನಂಬಿಕೆಯೇ ನಿರ್ದೇಶಕ ಎಂಬಂತೆ ..!!??.  ಈಚೆಗೆ ನಂಬಿಕೆ ವೈಯಕ್ತಿಕ ದ್ವೇಷ ಆಸೂಯೆಯಾಗಿ ಪರಿವರ್ತನೆಯಾಗುತಿರುವುದು ಖೇದಕರ.!! ಹಾಗೆ ನೋಡಿದರೆ ಎಲ್ಲರ ನಂಬಿಕೆಯು ಮೂಢವೆ... ಅದನ್ನು ಪ್ರಶ್ನಿಸುವ ಹಕ್ಕು ಇಲ್ಲ,  ಸ್ಧೆರ್ಯವೂ ಇಲ್ಲ??. ಬಲತ್ಕಾರದಿಂದ ಬಹಿರಂಗದ ಕತ್ತಲೆಯನ್ನು ಓಡಿಸಬಹುದು ಅಂತರಿಕ ಜಯ ಸಾಧ್ಯವಿಲ್ಲ ಎಂಬುವುದು ನನ್ನ ನಂಬಿಕೆ. ಒಮ್ಮೆ ರಾಮಕೃಷ್ಣ ಪರಮಹಂಸರು ಶಿಷ್ಯ ನರೆಂದ್ರರಿಗೆ ಹೀಗೆ ಹೇಳುತ್ತಾರೆ " ವರ್ತಕ ಹೇಗೆ ರೂಪಾಯಿ ನೋಟುಗಳನ್ನು ತೆಗೆದುಕೊಳ್ಳುವಾಗ ಶಬ್ದ ಮಾಡಿ ತೆಗೆದುಕೊಳ್ಳುವನೋ ಹಾಗೆಯೇ ನಾನು ಹೇಳುವುದನ್ನೆಲ್ಲಾ ಒರೆ ಕಲ್ಲಿಗೆ ತಿಕ್ಕಿ ನೋಡಿ ತೆಗೆದುಕೋ ... " ಅವರಂತೆ ನಾವೂ ಸಹ ನಂಬಿಕೆಗಳನ್ನು ಒರೆ ಕಲ್ಲಿಗೆ ತಿಕ್ಕಿ ನಂಬಿಕೆಯ ಮೂಲವನ್ನು ಉಳಿಸೋಣ ನಮ್ಮ ಯಕ್ಷಗಾನ, ಭೂತಕೋಲ, ನಾಗಾರಾಧನೆಗಳು ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ತುಳುನಾಡಿನ ಸಾಂಸ್ಕೃತಿಕ ರಾಯಭಾರಿಗಳಾಗಿ ಪ್ರತಿನಿಧಿಸಿ  ನಮ್ಮನ್ನು ಪ್ರತಿಬಿಂಬಿಸುತ್ತಿವೆ ಇದು ನಮ್ಮ ಸಂಸ್ಕೃತಿಗೆ, ನಂಬುಗೆಗೆ ದೊರೆತ ಹಿರಿಮೆಯೂ ಹೌದು , ಗರಿಮೆಯೂ ಹೌದು.

            ಕಡೆಗೆ ಭಗವಂತ ನಮ್ಮ ಆಚರಣೆ ಮತ್ತು ವಿಧಿ ಅನುಷ್ಠಾನಗಳ ಬಗ್ಗೆ ಎಲ್ಲೂ, ಎಂದು ತಲೆಕೆಡಿಸುವುದಿಲ್ಲ.  ಆ  ಆಚರಣೆಯ ಹಿಂದಿನ ನಮ್ಮ ಹೃದಯ ಹಾಗೂ ಉದ್ದೇಶವನ್ನು ಗಣನೆಗೆ ತೆಗೆದುಕೊಳ್ಳುತ್ತಾನೆ. ಇತರರಿಗೆ ನೋವುಂಟು ಮಾಡುವ ಆಚರಣೆಯನ್ನು, ನಂಬಿಕೆಯನ್ನು  ತ್ಯಜಿಸೋಣ, ಭಾರತ ಮುಕುಟದಂತಿರುವ ಸಂಸ್ಕೃತಿ , ನಂಬಿಕೆಗಳನ್ನು ಉಳಿಸಿ ಬೆಳೆಸೋಣವಲ್ಲವೇ ಪ್ರಜ್ಞಾವಂತ ಜನರೇ.....ಏನಂತೀರಿ????..!!

(ಈ ಭಾಷಣ ಮಂಗಳೂರು ಆಕಾಶವಾಣಿಯಲ್ಲಿ ಪ್ರಸಾರವಾಗಿತ್ತು)
ಮಂಗಳೂರು ಆಕಾಶವಾಣಿಯ ಧ್ವನಿ ಕೇಳಲು ಇಲ್ಲಿ ಚಿಟಿಕೆ ಹೊಡೆಯಿರಿ
https://soundcloud.com/bharathesha-ab/a-short-talk-namma-nambikegalu



No comments:

Post a Comment

Greetings from Mangalore: The Cradle of Banking Excellence

Hello from Mangalore! You've probably heard in quizzes that the cradle of banking is nothing but Dakshina Kannada or Mangaluru. Mangalor...