Wednesday, November 6, 2019

ತುಳು ಪದ ವಿಶೇಷ


ಭಾಷೆ ಎಂಬುದು ಒಂದು ವಿಸ್ಮಯ. ನಾಗರಿಕ ಮಾನವನ ಮಹಾ ಅನ್ವೇಷಣೆಯಲ್ಲಿ ಇದೂ ಒಂದು. ಉಸಿರೆಂಬ ಶಬ್ದಗಾಳಿಯ ನಡುವೆ ಸಿಲುಕಿ ನಿರಂತರ ಕಂಪನವಾಗಿ, ಕಂಪನವು ಒತ್ತಡ, ಬಲ ಪ್ರಯೋಗ ಹಾಗೂ ಕಣಗಳ ಸ್ಥಾನ ಪಲ್ಲಟದಿಂದ ಉಂಟಾಗಿ, ಕಂಪನವು ಅಲೆಗಳ ರೂಪವಾಗಿ ಮಾತು ಅರಳು ಹುರಿದಂತೆ ಅರಳುತ್ತದೆ. ಜಗತ್ತಿನಲ್ಲಿ ಸಾವಿರಾರು ಭಾಷೆಗಳಿವೆಯಂತೆ. ಅವುಗಳಲ್ಲಿ ತುಳುವಿಗೂ  ವಿಶಿಷ್ಟ ಸ್ಥಾನವಿದೆ. 2000 ವರ್ಷಗಳಿಂದ ಜನ ಭಾಷೆಯಾಗಿದ್ದು, ಇಂದಿಗೂ  ಜೀವಂತವಾಗಿರುವ ನುಡಿ ಇದು. ಇಂತಹ ಅನನ್ಯತೆ ಇರುವುದು ಕೆಲವೇ ಭಾಷೆಗಳಿಗೆ ಮಾತ್ರ. ಅಸಂಖ್ಯಾತ ಜನ ತುಳುವನ್ನು ಬಳಸುತ್ತಾ  ಬಳಸುತ್ತಾ ನುಡಿಯಲ್ಲಿನ ಶಬ್ದಗಳಿಗೂ ಅವುಗಳ ಆಳದ ಅರ್ಥಗಳಿಗೂ ಅನನ್ಯ ಸಂಬಂಧ ಉಂಟಾಗಿದೆ. ಮಾತಿಗೂ ಅರ್ಥಕ್ಕೂ ಇರುವ ನಂಟನ್ನು ಕಾಳಿದಾಸ ಶಿವ ಪಾರ್ವತಿಯರಿಗೆ ಹೋಲಿಸಿದ್ದಾನೆ. ಆದರೆ ಶಬ್ದ ಅರ್ಥಗಳಲ್ಲಿ ಮೂಲಭೂತವಾದ ನಂಟೇನು ಇಲ್ಲ ಎನ್ನಬಹುದೇನೋ! ಹೆಚ್ಚಿನವು ರೂಪ, ಗುಣ, ಲಕ್ಷಣ ಮತ್ತು ರೂಢಿಯಿಂದ ಬಂದವಷ್ಟೇ.

ಒಂದು ಭಾಷೆಯ ಮೂಲಕ ಆಲೋಚನೆ ರೂಪು ತಾಳಿ ಮೊಟ್ಟೆಯಾಗಿ ಕಾವು ಕೊಟ್ಟು ಒಡೆದು ಮರಿಯಾಯಿತೆಂದರೆ ಅಲ್ಲಿ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಆದುದರಿಂದ ಭಾಷೆಯ ಹದವನ್ನು ತಿಳಿದು ಮಾತನಾಡುವುದನ್ನು ಇತರರು ಹೇಳಿದ್ದನ್ನು ಸರಿಯಾಗಿ  ಅರ್ಥ ಮಾಡಿಕೊಂಡು ಯೋಚಿಸುವವರಾಗಬೇಕಾಗುತ್ತದೆ. ಅದಕ್ಕಾಗಿ ಮಾತು ಮತ್ತು ಅರ್ಥ ಇವೆರಡರ ಸಂಬಂಧವನ್ನು ಅರಿತಾಗ ಮಾತ್ರ ಮಾತಿನ ಹದವಾದ ಎರಕ ಉಂಟಾಗುತ್ತದೆ. ಮಾತಿನ ಹೊರಮೈ ಅದರಲ್ಲಿ ಅರ್ಥ ಬಂದು ಸೇರುವ ಬಗ್ಗೆ, ಅದರ ಉಚ್ಚಾರ, ಶಬ್ದ ಒಡೆದು ನೋಡುವ ಪರಿ ಹೀಗೆ ಇವುಗಳ ಒಳಮರ್ಮವನ್ನು ತಿಳಿದರೆ ಭಾಷೆಯ ಬಗೆಗಿನ ಹಿಡಿತ ಕೈಗೂಡೀತು. ಇದು ಅಭ್ಯಾಸದಿಂದ. ಓದುವುದರಿಂದ ಹಾಗು ಬಳಸುವುದರಿಂದ  ಸಾಧ್ಯವಾಗುವುದು. 2000 ವರ್ಷಗಳಲ್ಲಿ ಅಸಂಖ್ಯಾತ ತುಳುವರುಸರವುಡು ಸರವುಮಲ್ಲೆಎಂದು ಮಾತನಾಡುವ, ಕೇಳಿಸಿಕೊಳ್ಳುವ ಭಾಷೆಯಾದ ತುಳುವನ್ನು ನಿರಂತರವಾಗಿ ಹರಿಯುವ ನದಿಯಂತೆ ಪದಕಟ್ಟುತ್ತಾ, ಪದ ಒಡೆಯುತ್ತಾ , ಅನ್ಯಭಾಷೆಯ ಪದಗಳ ಜೊತೆ ನೆಂಟಸ್ತಿಕೆ ಮಾಡುತ್ತಾ ಬಂದಿದ್ದಾರೆ. ಹರಿವಿನಲ್ಲಿ ಹಲವು ಶಬ್ದಗಳು ಹಿಂದಿನಂತೆ ಉಳಿದು ಬಂದಿದೆ. ಕೆಲವು ಮಾರ್ಪಾಡು ಮತ್ತೆ ಕೆಲವು ಮರೆಯಾಗಿ ಮರಳಲ್ಲಿ ನೆರಳಾಗಿ ಇಂಗಿಹೋಗಿವೆ. ಅದೆಷ್ಟೋ ಪದಗಳು ಹೊಸದಾಗಿ ಬಂದು ಬಂಧುರಾಗಿ ಸೇರಿಕೊಂಡಿವೆ. ಹೀಗೆ ಶಬ್ದಗಳ ನದಿಹರಿಯುತಿದೆ. "ಶಬ್ದ ಪಾರಂ ಆರ್ಗಂ ಅಶಕ್ಯಂ" ಎಂಬ ಮಾತಿದ್ದರೂ, ನಾವು ಬಳಸುವ ಶಬ್ದಗಳ ಸ್ವರೂಪ ಅಂದರೆ ಅವುಗಳ ಹುಟ್ಟು ಬೆಳವಣಿಗೆಯನ್ನು ಕೆದಕುವ ಹಾಗೂ ಶಬ್ದಗಳ ದಾಂಪತ್ಯದ ಮರ್ಮವನ್ನು ಕೆದಕುವ ಅದರ ಫಲವನ್ನು ಕುಡಿಗಳಲ್ಲಿ ಹುಡುಕುವ ಮೂಲಕ ಪದಗಳ ಹದವನ್ನು ಹರಿವನ್ನು ಹುಡುಕುವ ಚಿಕ್ಕ ಪ್ರಯತ್ನವಿದು.

ಆದಿವಾಸಿ ಸಂಸ್ಕೃತಿಯನ್ನು ಒಳಗೊಂಡ ತುಳುನಾಡಿನ ಸಂಸ್ಕೃತಿಯು ಕೃಷಿಯನ್ನು ಒಳಗೊಂಡ, ಮುಖ್ಯವಾಗಿ ಭತ್ತದ ಕೃಷಿ. ಭತ್ತದ ಕೃಷಿ ಸಾಹಿತ್ಯದಲ್ಲಿ ಕಂಡು ಬರುವ ಪಾಡ್ದನ, ಸಂಧಿ, ಉರಲ್, ಕವಿತೆ ಇದರಲ್ಲಿ ಬರುವ ಬಿತ್ತು, ಬೆನ್ನಿ, ಬಾರ್, ಬೇಸಾಯ, ಬುಲೆ , ಬೇಲೆ, ಬೇಂಕೆ, ಬೇನೆ, ಬೆಗರ್, ಬಿದೆ , ಬಯಿ, ಭತ್ತದ ಸಂಸ್ಕೃತಿಯನ್ನು ಬಿಂಬಿಸುತ್ತದೆ.

ಈಗ ಒಂದೊಂದೇ ತುಳು ಶಬ್ದಗಳನ್ನು ನೋಡುವುದಾದರೆ, ಸಂಸ್ಕೃತದಲ್ಲಿ ಬೀಜವಾದರೆ ದ್ರಾವಿಡದಲ್ಲಿ ಅದು ಕುರು ತುಳುವಿನಲ್ಲಿ ಬಿತ್ತು ಎಂದಾಗುತ್ತದೆ. ಮೊಳಕೆಗೆ ಬಂದ ಬೀಜಗಳಿಗೆ ಪೊಜಿಲು ಬಿತ್ತು, ಮೊಳಕೆ ಬರದ ಬೀಜಗಳಿಗೆ ಪೊಡಿ ಬಿತ್ತು ಎಂದಾಗುತ್ತದೆ. ಪುಂಡಿ ಬಿತ್ತು, ಕೈಬಿತ್ತು, ಕಿಂಕಿಣಿ ಬಿತ್ತು, ಪೊಟ್ಟು ಬಿತ್ತು ಎಂಬೆಲ್ಲ ಬೇರೆ ಬೇರೆ ಸಂದರ್ಭಗಳ ಪ್ರಯೋಗದಲ್ಲಿದೆ. ಜೊತೆಗೆ ಬಿತ್ತು ಪಾಡುನ, ಬಿತ್ತು ನರ್ಗಾಪುನ, ಬಿತ್ತುನವು, ಬಿತ್ತ್ ತಾರಾಯಿಬಿತ್ತ್ ಮುಡಿ, ಬಿತ್ತ್ ಬೋರಿ ಇವು ಜೀವ ಜೀವಕ್ಕೆ ಸಾಕ್ಷಿಯಾದವುಗಳ ವಂಶ ವಂಶದ ಕುಡಿ ಎಂಬ ಅರ್ಥವನ್ನು ಕೊಡುತ್ತದೆ. ಇನ್ನು ದ್ರಾವಿಡ ಭಾಷೆಯ ಕುರುವಿನ ಕಡೆ ಹೋದರೆ ಮಲಯಾಲಂನಲ್ಲಿ ಚಕ್ಕ ಕುರು ಅಂದರೆ ಹಲಸಿನ ಬೀಜ ತುಳುವಿನಲ್ಲಿ ಪೆಲತ್ತರಿ. ಅದಕ್ಕೆ ಸಂವಾದಿಯಾಗಿ ಅರಿ, ಜೂವೊತ್ತರಿ, ನಿಲುತ್ತರಿ ಪುತ್ತರಿ (ಪೊಸ ಅರಿ), ಹುತ್ತರಿ , ಸಾಮೆತರಿ ಎಂಬ ಪದಗಳು ಬಳಕೆಯಲ್ಲಿವೆ ಇವೆಲ್ಲ ಹುಟ್ಟು, ಸಮೃದ್ಧ, ಫಲವಂತಿಕೆ, ಜೀವನದ ಬಗೆಗಾಗಿವೆಇವು ಕೊಡವ, ತಮಿಳಿನಲ್ಲಿಯೂ ಬಳಕೆಯಲ್ಲಿವೆ. ಆದರೆ ಕನ್ನಡದ ಅಕ್ಕಿ, ಅರಬ್ಬಿಯ ಆಲ್ರುಸ್ ಗಳಿಗೆ ಸಂಬಂಧ ಕಲ್ಪಿಸುವುದು ಕಷ್ಟ ಸಾಧ್ಯ.

ಕುರುವನ್ನು ಆದಿಯಾಗಿರಿಸಿ, ತುಳುವಿನಲ್ಲಿ ಕುರುಂಟು ಎಂಬ ಪದವಿದೆ. ಇದು ದೈವಾರಾಧನೆಯ ಸಂಧರ್ಭದಲ್ಲಿ ದೈವಕ್ಕೆ ಕೊಡುವ ಒಂದು ಗಂಟಿನ ಕೈ ಕಾಣಿಕೆ. ಇದರಲ್ಲಿ ಅಕ್ಕಿ ಅಥವಾ ಬತ್ತವನ್ನು ತುಂಬಿಸಿ ಬೈಹುಲ್ಲಿನಲ್ಲಿ ಕಟ್ಟಿ ಅದಕ್ಕೊಂದು ಕೈ ಮಾಡಿ ಕೊಡುವುದು. ಇದು ಸಾಂಸ್ಕೃತಿಕ ನೆಲೆಯ ಶಬ್ದ ಎಂಬ ಜಿಜ್ಞಾಸೆ ಇದ್ದರೂ ಕುರು ಆದಿ ಪ್ರಯೋಗವಾಗಿದೆ. ಒಟ್ಟಾರೆ ಉರುಂಟು, ಕುರುಂಟು, ಮುರುಂಟು, ಸುರುಂಟು ಶಬ್ದಗಳೆಲ್ಲ ಬಾಯಿಯನ್ನು ಸುರುಂಟಿ ಸುತ್ತಿಕೊಂಡು ಅಥವಾ '' ಎನ್ನುವಂತೆ ಮಾಡುತ್ತದೆ. ಇದೇ ಕುರುಂಟು ಕೊಳಕೆ ಗದ್ದೆಯಲ್ಲಿ ಬೀಜ ಬಿತ್ತುವ ಮೊದಲು ನೀರು ಸರಿಯಾಗಿ ಹರಿದು ಹೋಗಲು ಚಿಕ್ಕ ಕಾಲುವೆಗಳನ್ನು ಮಾಡಲು ಉಪಯೋಗಿಸುವ ಸ್ವಲ್ಪ ದಿನ್ನ ಇರುವ ಗುಂಡಗಿನ ಕಲ್ಲು ಹೌದು. "ಅರಿಬೈಲ್ತ ಪೂಕರೆ ಕಂಡೊಟ್ ಸಂಕಪಾಲೆ ಕುರುಂಟು ಒಯಿಪುವೆ" ಎಂಬ ನಂಬಿಕೆಯಿದೆ. ಕುರುಂಟುವಿಗೆ ಕುಗ್ಗಿಹೋಗುವುದು, ಮುದುಡು, ಸುರುಳಿಸುತ್ತು, ಅಕ್ಕಿಯ ಸಣ್ಣ ಮುಡಿ ಒಂದೆಡೆಯಾದರೆ ಮದುಮಗಳ ಸಖಿಯು ಇದೇ ಕುರುಂಟು ಆಗಿದ್ದಾಳೆ. ಮದುಮಗಳ ಒಟ್ಟಿಗೆ ಬರುವ ಕುರುಂಟಿಗೆ ಕುರುಂಟು ಮರ್ಯಾದಿಯ ಬಿರ್ದ್  ಇದೆ. ಇದರೊಂದಿಗೆ ಕುರ್ಲೆ, ಕೊಡಿಪು, ಕೊಡಿಪಾಲೆ, ಕುಂಕುರು, ಕುರಲೆ, ಕುರುಂಬಿಲ್, ಕುರುಬಾಕಿಲ್, ಕುರೆ, ಕುರೆಪಾಟ್ ಎಂತೆಲ್ಲಾ ಕುರು ಎಂಬುದು ಸಾಮಾನ್ಯವಾಗಿ ಕಂಡು ಬರುತ್ತದೆ. ದ್ರಾವಿಡಿಯನ್ Etymology ಪ್ರಕಾರ ಕೊಡಿ ಎಂದರೆ Point, Peak , ಕುಡಿ, ಚಿಗುರು ಎಲೆ, ವಂಶ, ವಂಶದ ಕುಡಿ, ಬಾವುಟ, ಪತಾಕೆ, ಅಥವಾ ಧಾರ್ಮಿಕ ವಿಧಿ ಎಂದೆಲ್ಲ ಅರ್ಥಗಳು ಬರುತ್ತವೆ. ತಮಿಳು, ಮಲಯಾಲಂ, ಕೊಡವ ಭಾಷೆಗಳಲ್ಲಿಯು ಕೋಟ ಎಂಬ ಪ್ರಯೋಗದಿಂದ ಇದೇ ಅರ್ಥ ಬರುತ್ತದೆ. ”ಕಲ್ಲ ಮರಾಯಿಡ್ ನೀರ್ ದೆತ್ತೆರ್ ದೇವೆರ್ ಕೈ ಕೊಡಿ ಕಾರ ಕೊಡಿ ದೆಕ್ಯೆರ್ಎಂಬ ಪಾಡ್ದನದ ವ್ಯಾಖ್ಯಾನವಿದೆ. ದೈವ ದೇವರ ಧಾರ್ಮಿಕ ವಿಧಿಯ ಸಂದರ್ಭದಲ್ಲಿ ಮಡಿವಾಳನು ಶುಭಕಾರ್ಯ ನಡೆಯುವ ಸ್ಥಳದ ಮೇಲ್ಗಡೆಯ ಚಪ್ಪರಕ್ಕೆ ಚೌಕಾಕಾರವಾಗಿ ಕಟ್ಟುವ ಬಿಳಿಬಟ್ಟೆಯೂ ಹೌದು. ನಿಷೇಧ, ನಿಷಿದ್ಧ, ಯಂತ್ರ, ತಂತ್ರ, ಮಂತ್ರಗಳ ತಡೆಯ ಸಂಕೇತವಾಗಿ ಇದನ್ನು ಬಳಸುತ್ತಾರೆ. ಕಾಸರಕನ ಗೆಲ್ಲು, ಕೋಲು, ಚೀಂಕ್ರುಗಳನ್ನು ಬಳಸಿ ಕೊಡಿನಡ್ಪುನ ಎಂಬ ಬಳಕೆಯಿದೆ. ”ಕೊಡಿಕುಂಟುಎಂದು ಯಾವುದೇ ದೊಡ್ಡ ಉತ್ಸವದ ಸಂದರ್ಭದಲ್ಲಿ ಇಲ್ಲ್ ಒಕ್ಕೆಲ್  ಸಮಯದಲ್ಲಿ ಯಾರೆಲ್ಲ ಕೆಲಸಗಾರರಾಗಿ ದುಡಿದಿರುತ್ತಾರೊ ಅವರಿಗೆಲ್ಲ ಕೊಡುವ ಬಟ್ಟೆಯೂ ಆಗಿದೆ. ”ಕೊಡಿಯಡಿಎಂದರೆ ದೈವಾರಾಧನೆಯ ಸಂದರ್ಭದಲ್ಲಿ ಭೂತವನ್ನು ಕಟ್ಟುವವನು 'ವಸಯ' ಆಗುವ ಜಾಗದ ದೊಂಪ ಮತ್ತು ಸಿಂಗದನದ ಮೇಲ್ಗಡೆ ಚಪ್ಪರದಲ್ಲಿ ಮಡಿವಾಳ ಬಿಳಿಬಿಟ್ಟೆ ಕಟ್ಟುತ್ತಾನೆ. ಒಂದು ನೆಲೆಯಲ್ಲಿ ಬಟ್ಟೆಯಾದರೆ ಮತ್ತೊಂದು ನೆಲೆಯಲ್ಲಿ ನಿಷೇಧವನ್ನು ಕಾಣಬಹುದು. ಯಾಕೆಂದರೆ ಇಲ್ಲಿಗೆ ಯಾರಿಗೂ ಪ್ರವೇಶವಿಲ್ಲ ಎಂಬುದು ಗಮನಾರ್ಹ. ಅದೇ ರೀತಿಕೊ()ಡಿಕಡ್ಪುನಎಂದರೆ ಮನೆಯಲ್ಲಿ ಯಾವುದೇ ಕಾರಣದಿಂದ ಉಶಾರಿಲ್ಲದವರಿಗೆ ಕಾಯಿಲೆ ಪೀಡಿತರಾದವರಿಗೆ ಒಂದು ನಿಗದಿತ ಪೂರ್ವ ನಿಯೋಜಿತ ದಿನದಂದು ಮಾಂಸಾಹಾರದೊಂದಿಗೆ ದೈವ ದೇವರ ಹೆಸರಿನಲ್ಲಿ ನಲಿಕೆ ಜನಾಂಗದವರು ಅವರು ನಂಬಿದ ದೈವರ ನಂಬಿಕೆಯ ವಿಧಿವಿಧಾನದಲ್ಲಿ ಮಾಡುವ ಪ್ರಾರ್ಥನೆಯು ಆಗಿದೆ. ಇಲ್ಲಿ ಒಂದು ನಿಶ್ಚಿತ ಗಡು ಸಾಂಕೇತಿಕ ನಿಷೇಧವು ಆಗಿರುತ್ತದೆ.
ಕೊಡಿ ಏರುನಎಂದರೆ ದೈವ ದೇವರುಗಳ ಉತ್ಸವಕ್ಕಾಗಿ ಧ್ವಜ ಏರುವುದು. ಇಲ್ಲಿ ಪತಾಕೆ ಬಟ್ಟೆಯ ತುಂಡು, ನಿಷೇಧ ಅರ್ಥಗಳನ್ನು ಕಾಣಬಹುದು. ಕೊಡಿ ಏರಿದ ಮೇಲೆ ಊರ ಹೊರಗೆ, ಗ್ರಾಮದ ಹೊರಗೆ ಹೋಗಿ ತಂಗುವುದುವಿಶೇಷ ಗೌಜಿ, ಶುಭ ಸಮಾರಂಭ , ಮಾಂಸಾಹಾರ ಹೀಗೆ ಇವನ್ನೆಲ್ಲ ಮಾಡಬಾರದೆಂಬ ನಿಯಮಗಳಿವೆ ಹಾಗೆಯೇ ಕೋಡಿ ಎಂದರೆ ಮೂಲೆ, ತುದಿ ಎಂಬ ಸ್ಥಳವಾಚಿಯು ಬಳಕೆಯಲ್ಲಿದೆ. ತೆಲುಗು ಭಾಷೆಯಲ್ಲಿ ಜಲವಾಚಿಯಾಗಿತಗ್ಗಾದ ನೀರಿನ ಬೈಲು”, ನೀರು ಹರಿಯುವ ತೋಡು ಎಂಬ ಪದಾರ್ಥವಿದೆ. ಕೋಡಿ ಮಜಲು, ಬೆಂಗೋಡಿ, ಮುಡೋಡಿ , ಮುಂಡೋಡಿ  ಮುಸ್ಥಳನಾಮಗಳನ್ನು ನಾವು ಕಾಣಬಹುದು.
ಅರದಲ ಮತ್ತೊಂದು ಪದ. ಇದು ದೈವಾರಾಧನೆಯ ಸಂದರ್ಭದಲ್ಲಿ ಭೂತ ನರ್ತಕರು ಮುಖ, ಮೈ ಮೇಲಿನ ಸಿಂಗಾರಕ್ಕಾಗಿ ಹಚ್ಚಿಕೊಳ್ಳುವ ಜಾನಪದ ಬಣ್ಣ. ಇದು ಒಂದು ಬಗೆಯಲ್ಲಿ ನೆಲಮೂಲದ ನೈಜ ಪ್ರಾಕೃತಿಕ ಬಣ್ಣ. ಇಲ್ಲಿ ಮೂಲ ಬಣ್ಣಗಳಾಗಿ ಹಳದಿ, ಕಪ್ಪು, ಕೆಂಪುಗಳಿವೆ. ಮುದ್ರೆ, ಚುಕ್ಕಿ. ಚುಟ್ಟಿ, ಗೆರೆ, ಸುಲಿ, ನಾಮ, ನಾಮ ಬರೆಪ್ಪುನಚುಟ್ಟಿ ಬರೆಪ್ಪುನ, ದಾಡೆ ಬರೆಪ್ಪುನ ಹೀಗೆ ಹಲವುಅರದಲ ಎನ್ನುವಂತದ್ದು ವಿದ್ವಾಂಸರ ನೆಲೆಯಲ್ಲಿ ಇದೊಂದು ಪಾರಿಭಾಷಿಕ ಪದ. ಹಳದಿ, ಅರಶಿಣ ಸಂಬಧಿಸಿದ್ದು ಗಾರ್ಸಿಯ ಪ್ರಭೇದದ ಮರ ಎಂಬ ನೆಲೆಯಲ್ಲಿ ಜಿಜ್ಞಾಸೆಯಿದೆ.

ಕಪ್ಪು ಬಣ್ಣಕ್ಕಾಗಿ ಬೈಹುಲ್ಲನ್ನು ಹೊತ್ತಿಸಿ ಮಸಿ ಮಾಡಿ ಅದನ್ನು ಎಣ್ಣೆಯಲ್ಲಿ ಕಲಸಿಮಯಿಮಾಡಿದರೆ, ತೆಂಗಿನ ಗೆರಟೆ ಸುಟ್ಟು ಮಾಡಿದಚಿಪ್ಪಿ ಕರಿ’ಯನ್ನು ಬಳಸುತ್ತಾರೆ. ಬಿಳಿ ಬಣ್ಣಕ್ಕಾಗಿ ಜೇಡಿ ಅಥವಾ ಅಕ್ಕಿಯನ್ನು ಅರೆದು ಬೊಳ್ಗಲ್ ಪೊಡಿಯಿಂದ ಮಾಡಿದರೆ,   ಹಳದಿ ಬಣ್ಣಕ್ಕಾಗಿ ಆನೆ ಮಂಜೊಲ್, ಬಚ್ಚನಾರೆ ಬೇರ್ ಗಳನ್ನು ಬಳಸುತ್ತಾರೆ. ಮುಖ್ಯವಾಗಿ  ಇಲ್ಲಿ ಅರ, ಅರೆ ಪದಗಳ ಅರ್ಥಗಳನ್ನು ಕಾಣಬಹುದು. ಅರೆದು ಮಾಡುದರಿಂದ ಕ್ರಿಯಾ ಘಟಕದ ನೆಲೆಯಲ್ಲಿ ಅರದಲ ಬಂದಿದೆಯೊ ಎನೋ ಎಂಬ ಕುರುಹು ಇದೆ. ಅರ ಎಂದರೆ ಗರಗಸಗಳನ್ನು ನಯಗೊಳಿಸುವ Multipointಗಳಿರುವ ಸಣ್ಣ ಹತ್ಯಾರು, ಹಲವು ಬಾಯಿ ಇರುವ ಲೋಹದ ವಸ್ತುಗಳನ್ನು ನಯಗೊಳಿಸುವ ಸಾಧನವಾಗಿದೆ. ಅಂಗೈ, ಕೈಯ ಬೆರಳುಗಳಿಂದ ಮುಖ, ದೇಹವನ್ನು   ಉಜ್ಜಿಕೊಳ್ಳುವುದರಿಂದ ಇದು ಒಂದು ನಮೂನೆ ಅರದಿಂದ ಅರೆದಂತೆ ಬಾಸವಾಗುತ್ತದೆ. ಜೊತೆಗೆ ಅರವು, ಆರ್ಕ್(ತಬ್ಬು),  ಅರ್ಕೆಲ್, ಅರೆಪ್ಪು, ಅರಬಾಯಿ, ಅರ್ಕಂಜಿ(ಅರಿನ್ ಕೈಟ್ ಉಳುಂಬುತ್(Friction) ದೆಕ್ಕುನಾ ನೀರ್ ) ಅರಂಟೆಲ್, ಅರಂಜೆಲ್ ಪದಗಳು ಬಲಕೊಡುತ್ತದೆ. 

 'ಅರ್' ಸ್ಥಳನಾಮವಾಗಿಯೂ ಗಮನಿಸಬಹುದು. ತಾರ್, ಸಾರ್, ದೇವರ  ಜಲಸ್ನಾನ ಆರಾಟೊ ಮುಖ್ಯವಾಗಿ ಜಲವಾಚಿಯಾದ ಬಳಕೆಗಳಾಗಿವೆ. ಅರ್ಕುಳ, ಅರಿಯಡ್ಕ, ಅರಂದ್, ಅರಂತೋಡು, ಅರ್ಕಲ, ಕೊಂಬಾರ್, ಮಿಯಾರ್ ಗಳಲ್ಲಿ ಸಾಧಿತ ಮತ್ತು ವಾರ್ಗಿಕ ಅಕೃತಿಮಗಳಾಗಿ ಇವುಗಳು ಸೇರಿಕೊಂಡಿವೆ . ಒಟ್ಟಾರೆ ನೀರಿನಿಂದ ಸೇರಿಸಿ ಅರೆಕಲ್ಲಿನಿಂದ ಅರೆದ ಅರೆಪ್ಪು ಅರದಾಳವಾಯಿತೆಂದರೂ ಆಶ್ಚರ್ಯಪಡಬೇಕಿಲ್ಲ.

ಪನಿ ಅವಾರೊಪನಿವಾರೊ ಪನಿ ಮತ್ತು ಅವಾರೊ ಎಂಬೆರಡು ಶಬ್ದದಿಂದ ಬಂದಿರುವಂತಹುದು. ಪನಿ ಎಂದರೆ ತಂಪು, ಹನಿ, ಸಣ್ಣ, ಸ್ವಲ್ಪ ಎಂಬರ್ಥಗಳಿವೆ. ಇರ್ಪನಿ, ಬಿರ್ಪನಿ, ಧಾರೆ ಪನಿ, ಪನಿನೀರ್, ಪನಿಪ್ಪುನಿ, ಪನಿಪು, ಪನಿ ಕಡಿಪುನ, ಪನಿಕತೆ , ಪನಿಕಪ್ಪೆ, ಪನಿದೊಂಬು, ಪನಿಕುಂಕುಮ ಇಲ್ಲಿ ದೈವಕ್ಕೆ ಬೆಟ್ಟದಷ್ಟು ಬೇಕು. ಮಾನವರಾದ ನಾವು ಅಷ್ಟೆಲ್ಲಾ ನೀಡಲು ಅಸಾಧ್ಯ ಬದಲಾಗಿ ಹನಿಯಷ್ಟು ನೀಡಿದನ್ನು ಬೆಟ್ಟದಷ್ಟು ಎಂದು ತಿಳಿದು ನಾವು ಕೊಡುವ ಅವಾರೊ ಆಹಾರವನ್ನು ಭಕ್ತಿ ಪೂರ್ವಕವಾಗಿ ಸ್ವೀಕರಿಸಬೇಕೆಂಬುದು ಆಗಿದೆ. ಅವಾರೊ ಸಂಸ್ಕೃತದ ಆಹಾರದಿಂದ ಬಂದಿದೆ ಎಂದರೂ ದ್ರಾವಿಡದಲ್ಲಿ ಅವ್ ಪ್ರತ್ಯಯ ಭತ್ತ ಅಕ್ಕಿಗೆ ಸಂಬಂಧಿಸಿದ್ದಾಗಿದೆ. ಅವಲ್, ಅವಲಕ್ಕಿ, ಅವಿಲ್ ಎಂಬ ಬಳಕೆ ಕಾಣಬಹುದು. ದೈವಗಳಿಗೆ ಕೊಡಿ ಬಾಲೆ ಎಲೆಯಲ್ಲಿ ಬಡಿಸಿ ಅರ್ಪಿಸುವ ಕಜ್ಜಾಯವು ಹೌದು. ನಮ್ಮ ಸುತ್ತಮುತ್ತಲು ಬೆಳೆಯುವ ನಮ್ಮದೇ ಆಹಾರಗಳಾಗಿರುವ ಬಾಳೆಹಣ್ಣು, ತೆಂಗಿನಕಾಯಿ, ವೀಳ್ಯದೆಲೆ, ಅಡಿಕೆ, ಬೆಲ್ಲ ಪೊರಿಗಳನ್ನು ಒಟ್ಟಾಗಿ ನೀಡುವುದು ನೋಡಬಹುದು. ಇಲ್ಲಿಯು ಪೊರಿ ಮುಖ್ಯವಾದುದರಿಂದ ಅಕ್ಕಿ ಸಂಬಂಧಿ ಪದಾರ್ಥ ಎಂಬುವುದದು ಸ್ಪಷ್ಟವಾಗುತ್ತದೆ. ಪನಿಯಾರದಂತೆ ಬಾರಣೆ, ಬಲಿ, ಬಿಂದು, ಅಂಗಾತ್ನೆ, ಅಗೆಲ್ಆವಾರೊ , ಸರ್ವೆ, ಪಸಾರ್ನೆ, ಭೋಗ ಎಲ್ಲವೂ ಇದೇ ಅರ್ಥ ಕೊಡುತ್ತದೆ.

ತುಳುವಿನಲ್ಲಿ ಇಂತಹ ಬಹಳಷ್ಟು ಶಬ್ದಗಳು ಕುತೂಹಲ ಕೆರಳಿಸುವಂತಿದೆ. ಅವುಗಳ ಸ್ವರೂಪ, ರೂಢಿ, ಲಕ್ಷಣ, ಉಚ್ಚಾರ, ಆಕೃತಿಮಾ ಸಂದರ್ಭಗಳಿಗನುಸಾರವಾಗಿ ಬದಲಾಗುತ್ತವೆ. ಅವು ಪಾರಿಭಾಷಿಕ ಪದಾರ್ಥಗಳಾಗಿರಬಹುದು, ರೂಢಿಪದಗಳಾಗಿರಬಹುದು. ಸಾಂಸ್ಕೃತಿಕ ಸಂಬಂಧ ಬೆಸೆಯುವ ಕೃಷಿ ಸಂಬಂಧಿಗಳು ಆಗಿರಬಹುದು. ತುಳು ಪದದ ಜಿಜ್ಞಾಸೆಯಲ್ಲಿ ತುಲುವೆಂದರೆ ತುಳುವ ಪೆಲಕಾಯಿ, ಮೆದು, ನೀರು ಎಂಬುದನ್ನು ಬಿಟ್ಟು ಅದಕ್ಕಿರುವ ಪರ್ಯಾಯ ಪದಾರ್ಥಗಳಾದ ಆಕ್ರಮಣ, ಕೇರಳೋತ್ಪತಿಯ ತುಳು, ತಮಿಳಿನ ತುಲೈ, ತುರುನಾಡು, ತುರುವೆ, ತುಲ್ಲುನಾ, ತುಳ್ಳಲ್ ಎಲ್ಲ ಮುಖ್ಯ ಪಾತ್ರ ವಹಿಸುತ್ತದೆ ಅದೇ ರೀತಿ ಬೆರ್ಮೆರ್, ಸಿರಿಯ  ಬಿರ್ಮಾಳ್ವ , ಕೋಟಿ ಚೆನ್ನಯರ ಬೆರ್ಮೆರ್, Pietro Della Valle Brimore, ಅಮಿತ್ ಘೋಷ್ B-M-S ಬೊಮ್ಮ, ಬೊಮ್ಮರಸ  ಎಲ್ಲವುಗಳು ಚರಿತ್ರೆ, ಪ್ರಭುತ್ವ, ಆರಾಧನೆ, ನಂಬಿಕೆಗಳ ತುಳುವನ್ನು ಕಟ್ಟಬೇಕಾಗಿದೆ. ಎಲ್ಲೆ-ನಾಳೆ ಎಂಬ ಗಡಿಯು ತೆಂಗಿನಗಡಿಯು ಆಗಬಹುದು. ಕೋಡೆ, ಕೊಡಿ ಎಂಬ ನಿಷೇಧವು ಇರಬಹುದು. Sick ನಿಂದಾದ ಸೀಕು, ಕಾಕಜ್ನಿಂದಾಗಿ ಕಾಕಜಿಯು ಆಗಬಹುದು. ಆಟಿ-ಅರೆಗಾಲೊ, ಮಾಯಿ-ಮರಿಯಾಲೊ, ಮೂರ್ತೆ, ಪೊವುಲು, ಮುಡ್ಕನೆ, ಅಜಮಾರೊ, ಅಜಕೋಲು, ಅಡ್ಯರ, ವರಂಕ, ಕಾಂಗೊ-ದಾವನೆ, ಕುತ್ತಿ-ಕತ್ತಿ ಯಾವುದೇ ಇರಲಿ ಅವುಗಳ ಮೂಲಸ್ವರೂಪಗಳು ವಿಶಿಷ್ಟವಾದುವುಗಳು.

ಮಧ್ಯಮಣಿ ನ್ಯಾಯಎಂಬಂತೆ ಹಾರದ ಮಧ್ಯದಲ್ಲಿ ದೊಡ್ಡದಾಗಿರುವ ಒಂದು ನೀಲಿ ಮಣಿಯನ್ನೋ ಕೆಂಪನ್ನೋ ಪೋಣಿಸಿರುತ್ತಾರೆ. ಅದು ಹಾರದ ಎರಡು ಪಾರ್ಶ್ವಗಳಿಗೂ ಸೌಂದರ್ಯವನ್ನು ಕೊಡುತ್ತದೆ ಅಥವಾ ಮೂಗುತಿಯಲ್ಲಿ ಎರಡು ಮುತ್ತುಗಳ ಮಧ್ಯದಲ್ಲಿ ಕೆಂಪು ಇರುತ್ತದೆ. ಕೆಂಪಿನ ಕಾಂತಿಯೂ ಇಕ್ಕೆಲಗಳ ಮುತ್ತುಗಳ ಮೇಲೆ ಹರಡುತ್ತದೆ. ವಾಕ್ಯದಲ್ಲಿರುವ ಪದಾರ್ಥದಲ್ಲಿರುವ ಶಬ್ದವು ಪೂರ್ವೋತ್ತರ ವಿಷಯಗಳೆರಡಕ್ಕೂ ಸಂಬಂಧವಾದಾಗ ನ್ಯಾಯ ಪ್ರವರ್ತಿಸುತ್ತದೆ. ಇದು ಪದಗಳ ನ್ಯಾಯ.

ಚೀನಾ ಮಹಾಗೋಡೆಯನ್ನು ಹೇಗೋ ದಾಟಿಕೊಂಡು ಒಳಗೆ ನುಸುಳಿದ ವಿದೇಶೀ ಪ್ರವಾಸಿಗನೊಬ್ಬ ಚೀನಿಯವನೊಬ್ಬನಿಗೆ ಕೇಳಿದನಂತೆ ವಿದೇಶಿ ಆಕ್ರಮಣಕಾರರ ಹಾವಳಿಯನ್ನು ತಪ್ಪಿಸಲು ಇಂತಹ ದೊಡ್ಡ ಗೋಡೆಯನ್ನು ಕಟ್ಟಿದ್ದೀರಾ ಎಂದು? ಪ್ರಶ್ನೆಗೆ ಚೀನಿಯನು ಕೊಟ್ಟ ಉತ್ತರ ಅದು ಹಾಗಲ್ಲ !! ‘ವಿದೇಶಿಯರ ಸಂಸ್ಕೃತಿ ಚೀನಾದಲ್ಲಿ ಬರಬಾರದೆಂದು ಗೋಡೆ ಕಟ್ಟಿದ್ದೇವೆಎನ್ನುತ್ತಾನೆ ತರಹದ ಭಾಷಿಕ ನೆಲೆಯ ಗೋಡೆ ನಾವು ಕಟ್ಟಿಕೊಂಡು ಪದ, ಶಬ್ದ, ಮಾತುಗಳನ್ನು ಜತನದಿಂದ ಕಾಪಾಡುತ್ತಾ ಬೆಳೆಸುವುದು ಉತ್ತಮ.

ಹೀಗೆ ತುಳುವಿನ ಅನನ್ಯತೆಯ, ಅಸ್ಮಿತೆಯ ಪ್ರಾದೇಶಿಕತೆಯು ಗುರುತಾಗಿಸಿ ಪ್ರತಿ ಪದಾರ್ಥಗಳ ಸವಿರುಚಿ ಹುಡುಕುವುದೆಂದರೆ ಅದು ಮಳೆಗಾಲದ ಡೆಂಜಿ ಬೋಂಟೆಯಷ್ಟೆ ಸೊಗಸು. ಒಂದು ಹುಡುಕಿದರೆ ಮತ್ತೊಂದು ಮಗದೊಂದು ಎಂದು ಪದಾರ್ಥಗಳ ಬೇಟೆ ಖುಷಿಯ ಕೊಡುತ್ತದೆ. ಕರಾವಳಿಯ ತುಳುನಾಡಿನಲ್ಲಿ ಹಲವು ಸಮುದಾಯಗಳು, ಪ್ರಾದೇಶಿಕ ಭಿನ್ನತೆಯೊಂದಿಗೆ ಹಲವು ತುಳು ಶಬ್ದ, ಪದಗಳನ್ನು ಮಾತೃಭಾಷೆಯಾಗಿ ಬಳಸುತ್ತಿದ್ದಾರೆ. ಆಧುನಿಕತೆಯ ಕೊಡಿ ಅಡ್ಡ ಬರದೇ ಎಲ್ಲ ಕಡೆಯು ಬಿತ್ತು ಹಾಕಿಕೊಂಡು ಪನಿವಾರದಂತೆ ಎಲ್ಲರೂ ಸ್ವಲ್ಪ ಸ್ವಲ್ಪವೇ ಬಳಸುತ್ತಾ ಶಬ್ದ ಭಂಡಾರದೊಂದಿಗೆ ಆಟವಾಡುತ್ತಾ, ಅನನ್ಯತೆಯೊಂದಿಗೆ ಉಳಿಸಿಕೊಂಡು ಸಾಂಸ್ಕೃತಿಕವಾಗಿ ಬೆಳೆಸೋಣ ಎಂಬುದೇ ಆಶಯ.

ಸುಳ್ಯ ಸುದ್ದಿ ಬಿಡುಗಡೆ ದೀಪಾವಳಿ ವಿಶೇಷಾಂಕ 2019 ಇದರಲ್ಲಿ ಪ್ರಕಟವಾದ ಬರಹ.


Greetings from Mangalore: The Cradle of Banking Excellence

Hello from Mangalore! You've probably heard in quizzes that the cradle of banking is nothing but Dakshina Kannada or Mangaluru. Mangalor...