Sunday, November 21, 2021

ತುಳುವರ ದೀಪಾವಳಿ

 ಪರ್ಬೊ ಹೆಸರು ಹೇಳುವಂತೆ ತುಳುನಾಡಿನಲ್ಲಿ ಹಬ್ಬ ಎಂಬುವುದಾಗಿದೆ. ತುಡರ್ ಪರ್ಬೊ‌ವೆಂದು, ಬೆಳಕಿನ ಹಬ್ಬ ದೀಪಾವಳಿಯನ್ನು ತುಳುವರು ಕರೆಯುತ್ತಾರೆ. ಬೇಸಾಯ ಸಂಬಂಧಿ ಅಚರಣೆಯಾದ ದೀಪಾವಳಿ ಮೂರು ದಿನಗಳ ಕಾಲ ನಡೆಯುತ್ತದೆ. ದೀಪಾವಳಿ ಆಚರಣೆಯಲ್ಲಿ ಸಮುದಾಯದಿಂದ ಸಮುದಾಯಕ್ಕೆ ವ್ಯತ್ಯಾಸವಿರುತ್ತದೆ. ತುಳುನಾಡಿನಲ್ಲಿ ದುರಂತ  ವೀರರನ್ನು ಅರಾಧಿಸುವುದನ್ನು ಗರೋಡಿ, ಚಾವಡಿ, ದೈವಸ್ಥಾನಗಳಲ್ಲಿ ನೋಡಬಹುದು. ಜನಪದದಲ್ಲಿ ದುರಂತ ನಾಯಕರನ್ನು ವೈಭವಿಕರೀಸಿ ನೋಡುವುದು ವಿಶೇಷವಾದ ಒಂದು ತಂತ್ರವಾಗಿದೆ.  ಶಿಷ್ಟದ ಬಲಿಂದ್ರ ಅಥವಾ ಪುರಾಣದ ಬಲಿ ಚಕ್ರವರ್ತಿಗಿಂತ ಭಿನ್ನವಾದ ಕೃಷಿ ಸಂಸ್ಕೃತಿಯ 'ಬೊಲಿಯೇಂದ್ರ'ನೇ ತುಳು ಮತ್ತು ಅರೆಭಾಷೆ ಪ್ರದೇಶದಲ್ಲಿ ಬರುವ 'ಪರ್ಬೊ'  ಅಥವಾ ಹಬ್ಬ ಎಂಬ ನೆಲೆಯಲ್ಲಿರುವ ದೀಪಾವಳಿ ಅಚರಣೆಯಾಗಿದೆ.  ಪೂರ್ವದಲ್ಲಿ ಈ ನಾಡನ್ನು ಆಳಿದ ಜನಪ್ರಿಯ ಅರಸ ಬಲೀಂದ್ರನನ್ನು ಬರಮಾಡಿಕೊಂಡು ಆತನಿಗೆ ಬಲಿ ಸಮರ್ಪಿಸಿ "ಪೊಲಿ" ಹರಕೆ, ಹಾರೈಕೆಗಳನ್ನು ಪಡೆಯುವ ಸಂದರ್ಭವಾಗಿದೆ. ಇಲ್ಲಿ "ದೀಪ" ಪ್ರಧಾನ ಪಾತ್ರವಹಿಸುತ್ತದೆ, ಪ್ರಕೃತಿ ಸಹಜ ಅಮಾವಾಸ್ಯೆಯ ಕತ್ತಲಲ್ಲಿ ಜ್ಯೋತಿ ಬೆಳಗಿಸಿ ಆಚರಿಸುವ ಹಬ್ಬವೇ "ತುಡರ್ ಪರ್ಬೊ"ವಾಗಿದೆ. ಇದೇ ಬಲಿಯ ಬರುವಿಕೆಯ ಆಚರಣೆ ಕೇರಳ ರಾಜ್ಯದಲ್ಲಿ "ಓಣಂ"  ಸಮಯದಲ್ಲಿ ನೋಡಬಹುದು.



ಕೃಷಿ ಎಲ್ಲಿ ಜೀವನಾಧಾರವೊ ಅಲ್ಲಿ ಈ “ಪೊಲಿ” ಇರುತ್ತದೆ.  ಎಂದರೆ ಇದು ಸಮೃದ್ಧಿಯ ಸಂಕೇತವಾಗಿರುತ್ತದೆ. ಈ ನಾಡಿನಲ್ಲಿ ಕೃಷಿ ಮಾಡುತ್ತಾ ಬೇಸಾಯ ಮಾಡುತ್ತಾ ಭೂಮಿಯ ಒಡೆಯನಾದ ಬಲೀಂದ್ರ ಇಲ್ಲಿ ಪೂಜಾರ್ಹನಾಗುತ್ತಾನೆ. ವರ್ಷದಲೊಮ್ಮೆ ತುಳುನಾಡಿಗೆ ಬಂದು ಹೋಗುವ ಬಲೀಂದ್ರ ಆರಾಧನೆಯಲ್ಲಿ ಗುರುತಿಸಲ್ಪಡುತ್ತಾನೆ. ಕೃಷಿಯ ಪರಿಶ್ರಮದ ಫಲವು (ಬುಳೆ ಬಾಗ್ಯ) ಗದ್ದೆಯಿಂದ ಮನೆಯಂಗಳಕ್ಕೆ, ಅಲ್ಲಿಂದ ಮನೆಯ ಚಾವಡಿ ಸೇರಿ ಮನೆ - ಮನ ತುಂಬುವ ಕಾಲ. ತೆನೆಗೂಡುವ, ತುಂಬುವ, ಉಕ್ಕುವ, ಅರಳುವ, ತುಳುಕುವ ಚೈತನ್ಯ ಸ್ವರೂಪಿಯಾಗಿದೆ. ಈ ಪೊಲಿ ಪದವು ಹೊಲದಿಂದ ಬರುವ ಉತ್ಪನ್ನದಿಂದಾಗಿ ಪೊಲಿ<ಪೊಲ<ಹೊಲದಿಂದ ಬಂದಿರಬಹುದು. “ಪೊಲ ಹಬ್ಬ” ವೆಂಬ ಕೃಷಿ ಸಂಬಂಧಿ ಆಚರಣೆ ಮಹಾರಾಷ್ಟ್ರ, ಛತ್ತಿಸ್‌ಗಢ ಮತ್ತು ಸುತ್ತಮುತ್ತಲ್ಲಿನ ರಾಜ್ಯಗಳಲ್ಲಿ ಶ್ರಾವಣ ತಿಂಗಳ ಅಮಾವಾಸ್ಯೆಯಂದು ಮಾಡುತ್ತಾರೆ. 


ಇಲ್ಲಿ ಭತ್ತ ಸಂಸ್ಕೃತಿಯನ್ನು ಪ್ರಧಾನವಾಗಿಟ್ಟುಕೊಂಡು ನಡೆಯುವ "ಪುದ್ವಾರ್", "ಹೊಸ್ತು"(ಹೊಸ ಅಕ್ಕಿ ಊಟ ಮಾಡುವ ಪದ್ಧತಿ) "ಪೊಲಿ"ಯನ್ನು ಕರೆಯುವುದು, ಅವಲಕ್ಕಿ ಬಡಿಸುವುದು, ಅವಲಕ್ಕಿಯನ್ನೇ ಪ್ರಸಾದವೆಂದು ನೀಡುವುದು, ಗಣಪತಿಗೆ ಇಡುವುದು(ವಿಘ್ನ ಬರದಂತೆ ಗಣಪತಿಯನ್ನು ಸ್ತುತಿಸುವ ಕ್ರಮ), ಅವಲಕ್ಕಿಯನ್ನೇ  "ಪೂವರಿ"ಯಾಗಿ ಬಳಸುವುದು. ಎಲ್ಲವೂ ಭತ್ತ, ಅಕ್ಕಿ ಮತ್ತು ಅದರಿಂದ ಬರುವ ಖಾದ್ಯ ಉತ್ಪನ್ನಗಳಾದ ಹೊದುಲು, ಹುರಿಯಕ್ಕಿ, ಅವಲಕ್ಕಿಗಳು ಇಲ್ಲಿ ನಡೆಯುವ ಹಲವಾರು ಅರಾಧನಾ ಮತ್ತು ಆಚರಣಾತ್ಮಕ  ಕ್ರಿಯಾಚರಣೆಯಲ್ಲಿ ಯಥೇಚ್ಛವಾಗಿ ಬಳಸಲಾಗುತ್ತದೆ. 


ತುಳುನಾಡಿನ ದೀಪಾವಳಿಯು  ಇಲ್ಲಿನ ಜಾನಪದೀಯ ನೆಲೆಯ ಜೀವನಾರ್ತನ ಆಚರಣೆಯಲ್ಲಿ ಒಂದಾದ ಸಾವಿನ ಪ್ರತೀಕವೂ ಪ್ರತಿರೂಪವೂ ಎಂದು ಹೇಳಬಹುದು. ದೀಪಾವಳಿ ಶುರುವಾಗುವುದು ''ಮೀಪುನ ಪರ್ಬೊ''ದಿಂದ. ಇದು ಸ್ನಾನ ಮಾಡುವ ಹಬ್ಬ. ಮನೆ ಮಂದಿಯೆಲ್ಲ ಎಣ್ಣೆ ಆಭ್ಯಂಜನ ಮಾಡಿ, ಮನೆಯ ಸ್ನಾನದ "ಮಂಡೆ"ಯನ್ನು ಶೃಂಗಾರ ಮಾಡಿ ಬಿಸಿಬಿಸಿ ನೀರಿನಲ್ಲಿ ಸ್ನಾನ ಮಾಡುತ್ತಾರೆ. ಮರುದಿನ ಹಾಲೆ ಮರ(Alstonia Scholari)ದ ಕಬರು ಇರುವ ಎರಡು ಕೊಂಬೆಗಳನ್ನು ನೆಲದಲ್ಲಿ ನೆಟ್ಟು ಅದಕ್ಕೆ ಅಟ್ಟೆ(ತಲೆ) ಮರವೆಂದು ತಲೆಯ ರೂಪವನ್ನು ಪೊಂಗಾರೆ ಮರ(Erythrina stricta)ದಿಂದ ಮಾಡುತ್ತಾರೆ.  ಈ ಹಾಲೆ ಮರ ಮತ್ತು ರಾಮಪತ್ರೆ ಎರಡು ಮರಗಳು ಮೃದು ಮರಗಳು ಮತ್ತು ಹಾಲು ಬರುವ ಮರಗಳಾಗಿವೆ. ಹಾಲು ಬರುವುದು ಸಮೃದ್ಧಿಯ ಸಂಕೇತ ಎಂದು ಜನಪದರ ನಂಬಿಕೆ. ಹೀಗೆ ಮರ ಹಾಕುವುದನ್ನು 'ಬೊಲಿಯೇಂದ್ರ ಮರ ಹಾಕುವುದು' ಎಂದು ಕರೆಯುತ್ತಾರೆ. ಮೂರನೆ ದಿನ "ಬೊಲಿಯೇಂದ್ರ" ಮರವನ್ನು ಕಾಡು ಹೂವು, ಅಡಿಕೆ ಹಿಂಗಾರ, ಬಾಳೆಯ ಪಂಬೆ(ಬಾಳೆ ದಿಂಡಿನ ಹೊರಗಿನ ಹಸಿ ಕವಚ)ಗಳನ್ನು ಗರಗಸದಂತೆ ಕೊಯ್ದು ಕಟ್ಟಿ ಶೃಂಗಾರ ಮಾಡುತ್ತಾರೆ. ಮತ್ತೆ ಬಲಿಯನ್ನು ಕರೆದು ಪ್ರಾರ್ಥಿಸುವ ಕ್ರಮವಿದೆ. ಇದಕ್ಕೆ ''ಬೊಲಿಯೇಂದ್ರನ್ ಲೆಪ್ಪುನ'' ಅಥವಾ ''ಬೊಲಿಯೇಂದ್ರನ್ ಅಳುನ'' ಎಂದು ಕರೆಯುತ್ತಾರೆ. ಬೆಳೆ ಬೆಳೆದ ಗದ್ದೆಗೆ - ಕೋಣ , ಎತ್ತು, ದನಕರುಗಳಿಂದ ತುಂಬಿದ ಹಟ್ಟಿಗೆ - ಕೃಷಿ ಸಹಾಯ ಉಪಕರಣಗಳಿಗೆ - ಧಾನ್ಯರಾಶಿಗೆ ದೀಪ ತೋರಿಸಿ 'ಪೊಲಿ' ಕರೆಯುವುದು.  ತುಳಸಿಕಟ್ಟೆಗೆ ತುಡಾರ್(ಸೊಡರು) ತೋರಿಸಿ, ಬಳಿಕ ಮನೆಯ ಬಾವಿ, ನಾಗಬನ ಇದ್ದರೆ ನಾಗ ಬನಕ್ಕೂ 'ತುಡಾರ್' ತೋರಿಸುವ ಸಂಪ್ರದಾಯವಿದೆ. ಬೊಲಿಯೇಂದ್ರ ಪಾರ್ದನದಲ್ಲಿ 

ಕರ್ಗಲ್ ಕಾಯನಗಾ, ಬೋರ್ಗಲ್ ಪೂ ಪೋನಗಾ, ಜಾಲ್ ಪಾದೆ ಆನಗ, ಪುಚ್ಚೆಗ್‌ ಕೊಂಬು ಬನ್ನಗ...(ಕಪ್ಪುಕಲ್ಲು ಕಾಯಿ ಅನಗ, ಬೊಲ್ಲುಗಲ್ಲ್ ಹೂವು ಆದಾಗ, ಮನೆಯಂಗಳ ಪಾದೆ ಕಲ್ಲು ಅದಾಗ, ಬೆಕ್ಕಿಗೆ ಕೊಂಬು ಬರುವಾಗ..) ಎಂದು ಸಾಗುವ ಪಾಡ್ದನ, ಜಗತ್ತಿನಲ್ಲಿ ಸಾಮಾನ್ಯರಿಗೆ ಆಗದ ಷರತ್ತುಗಳನನ್ನು ಹೇಳುತ್ತಾ ಅಲ್ಲಿಯವರೆಗೆ ನಮಗೆಲ್ಲರಿಗೂ ಪೊಲಿ ಸಮೃದ್ಧಿಯನ್ನು ನೀಡಬೇಕು ಎಂದು ಬೇಡಿಕೊಂಡು “ಕೂ... ಕೂ...” ಎಂದು ನಮ್ಮವ ಬೊಲಿಯೇಂದ್ರ ಬಾ ಎಂದು ಕರೆಯುತ್ತಾರೆ. ಮರುದಿನ ಬಲಿಯೇಂದ್ರನನ್ನು ನೀರಿನ ಬದಿಯಲ್ಲಿ ಇಟ್ಟು ಬರುವುದು. ಇಲ್ಲಿ ತುಳುನಾಡಿನ ವ್ಯಕ್ತಿಯೊಬ್ಬ ಸತ್ತಾಗ ಮಾಡುವ ಕೆಲವು ಕ್ರಿಯಾಚರಣೆಗಳ ಸಾಮೀಪ್ಯವಿದೆ. ಸಾವು ಅದ ನಂತರ ಶವಕ್ಕೆ ಬಿಸಿ ನೀರಿನಲ್ಲಿ ಸ್ನಾನ ಮಾಡಿಸಿ, ಬಿಳಿ ಬಟ್ಟೆಯಿಂದ ಶೃಂಗಾರಮಾಡಲಾಗುತ್ತದೆ. ಈ ರೀತಿ ಕ್ರಮದ ಹೋಲಿಕೆ ಮಾನವ ರೂಪದಂತೆ ಕಾಣುವ ಬೊಲಿಯೇಂದ್ರ ಮರದದಲ್ಲಿ ಕಾಣಬಹುದು. 



ತಂಬಿಲ ಅಥವಾ ಸಂಬಿಲ ಎಂದು ಕಳೆದು ಹೋದ ಹಿರಿಯರನ್ನು ಗುರು ಕಾರ್ನೂರುರೆಂದು ನೆನೆಸುವುದು ಪ್ರಾರ್ಥಿಸುವುದು ತುಳುನಾಡು/ ಅರೆಭಾಷೆ ಪ್ರದೇಶದಲ್ಲಿ ಸಾಮಾನ್ಯವಾಗಿದೆ. ಇಂತಹುದೇ ಕ್ರಮ ಪರ್ಬೊ ಸಂಬಿಲ ಅಥವಾ ದೀಪಾವಳಿ ಸಂಬಿಲ ಎಂಬ ನೆಲೆಯಲ್ಲಿ ದೀಪಾವಳಿಯಂದು ಮಾಡುತ್ತಾರೆ. ಕುಟುಂಬದ ಹಿರಿಯರೊಂದಿಗೆ, ದೈವಗಳ ಆರಾಧನೆಗೂ ದೀಪಾವಳಿಯಲ್ಲಿ ವಿಶೇಷ ಮಹತ್ವವಿದೆ. ಮನೆಯ ಆವರಣದಲ್ಲೇ ಇರುವ ದೈವದ ಗುಡಿಯನ್ನು ಸ್ವಚ್ಛ ಮಾಡಿ, ಅಲಂಕಾರ ಮಾಡಿ, ದೀಪ ಬೆಳಗಿ, “ಪನಿಯಾರ” ಕೊಟ್ಟು ಆರಾಧಿಸುವ ಜನಪದ ಪದ್ಧತಿ ಇದೆ.  ಇದು ದೇವಸ್ಥಾನಗಳಲ್ಲಿ ವೈದಿಕ ಕ್ರಿಯೆಗಳೊಂದಿಗೆ ಮತ್ತು ಮನೆ ಮತ್ತು ದೈವಸ್ಥಾನಗಳಲ್ಲಿ ಅಸುರ ಕ್ರಿಯೆಯೊಂದಿಗೆ ನಡೆಯುತ್ತದೆ. 


ಸೈತ್ತಿನಕುಲೆನ ಪರ್ಬೊವೆಂದು ಅಚರಿಸುವ ದೀಪಾವಳಿ ಈ ಅನ್ವರ್ಥ ನಾಮ ಬರಲು ಆ ವರ್ಷದಲ್ಲಿ ಮರಣ ಹೊಂದಿರುವ ವ್ಯಕ್ತಿಗಳಿಗೆ ಬಜಿಲ್ ಪಾಡುನ/ ಅವುಲು ಹಾಕುವುದು/ಅವಲಕ್ಕಿ ಹಾಕುವ ಕ್ರಮವಿದೆ. ಇದು ಒಬ್ಬ ವ್ಯಕ್ತಿ ಸತ್ತ ನಂತರ ಅವನಿಗೆ ಆ ವರ್ಷದ ತುಳು/ಅರೆಭಾಷೆ ಕ್ಯಾಲಂಡರಿನ ಕಡೆಯ ಕಾರ್ಯಕ್ರಮವಾಗಿದೆ.  ಮರಣ ಹೊಂದಿದ ಮಹಿಳೆಗೆ ದೀಪಾವಳಿ ಅಮಾವಾಸ್ಯೆಯಂದು ಮತ್ತು ಮರಣ ಹೊಂದಿದ ಪುರುಷರಿಗೆ ದೀಪಾವಳಿ ಪಾಡ್ಯದಂದು ಮಾಡುತ್ತಾರೆ. ಅವರು ತೊಟ್ಟ ಬಟ್ಟೆ, ಬಳಸುತ್ತಿದ್ದ ಬಳೆ, ಕರಿಮಣಿ, ಅವರ ಇಷ್ಟದ ವಸ್ತು ಇತ್ಯಾದಿಗಳನ್ನು ಪೆಟ್ಟಿಗೆಯಿಂದ ಹೊರ ತೆಗೆದು ಒಣಗಿಸಿ ಮತ್ತೆ ಪೆಟ್ಟಿಗೆಯಲ್ಲಿ ಭದ್ರವಾಗಿ ಇರಿಸಲಾಗುತ್ತದೆ. ಹಾಗಾಗಿ ಕರಾವಳಿಯಲ್ಲಿ ಪೂರ್ವಿಕರನ್ನು ಸ್ಮರಿಸುವ ಹಬ್ಬ ಈ ದೀಪಾವಳಿಯಾಗಿದೆ.


ಅಮಾವಾಸ್ಯೆಯಂದು ದೀಪಾವಳಿ ಹಬ್ಬವಾದರೆ ಮುಂದಿನ ಹುಣ್ಣಿಮೆಗೆ ಕೊಡಿ ಪರ್ಬೊ ಬರುತ್ತದೆ. ಇದು ದೀಪಾವಳಿ ಕಳೆದು 16ನೇ ದಿನಕ್ಕೆ ಅಗುತ್ತದೆ. ಕೊಡಿ ಪರ್ಬೊ ಅಂದರೆ ದೀಪಾವಳಿಯ ಕೊನೆ ಎಂಬ ತುಳು ಅರ್ಥ ಕೊಡುತ್ತದೆ. ಕೊಡಿ ಪರ್ಬೊದಲ್ಲಿ ದೀಪಾವಳಿಯ ಪ್ರತಿರೂಪದ ಕ್ರಮಾಚರಣೆಗಳು ಇರುತ್ತದೆ. ದೀಪಾವಳಿಯ ದಿನಗಳ ಸಮಯದಲ್ಲಿ ಬಂದ ಸೂತಕದಂತಹ ನಿಷೇಧಗಳು ಅಥವಾ  ಅನಿವಾರ್ಯ ಕಾರಣಗಳಿಂದ ನಡೆಸಲಾಗದಿದ್ದಾಗ ಮಾಡುತ್ತಾರೆ. ಇದು ಮೇಲ್ನೋಟಕ್ಕೆ ತುಳು/ ಅರೆಭಾಷೆ ಪ್ರದೇಶದಲ್ಲಿ  ಮರಣ ಹೊಂದಿದ ನಂತರ 16ನೇ ದಿನ ನಡೆಸುವ ಕ್ರಮಗಳಂತೆ ಕಂಡುಬರುತ್ತದೆ. ಜಾನಪದೀಯ ತುಳುವರ ದೀಪಾವಳಿ ಮರಣ ಹೊಂದಿದ ಬೊಲಿಯೇಂದ್ರನ ಅಚರಣೆ ವಿಶಿಷ್ಟವಾಗಿದೆ. 


ಇವನ್ನೆಲ್ಲ ಕಂಡಾಗ ಬಲಿ ಚಕ್ರವರ್ತಿಯು ಕೃಷಿಕನಾಗಿದ್ದ, ಭೂಮಿಯ ಒಡೆಯನಾಗಿದ್ದ, ಬೇಸಾಯವು ಆತನ ಪ್ರಮುಖ ವೃತ್ತಿಯಾಗಿರಬಹುದು ಎಂದೆನಿಸುತ್ತದೆ. ಗೋವು, ಕೃಷಿ ಮತ್ತು ಭೂಮಿಯ ಜೊತೆ ಆತನ ಕಥೆಯು ತಳಕು ಹಾಕಿಕೊಂಡಂತಿದೆ. ಈ ಕಾರಣದಿಂದಲೇ ತುಳುನಾಡಿನಲ್ಲಿ ಬಲೀಂದ್ರನನ್ನು “ಭೂಮಿಪುತ್ರ”ನೆಂದು ಕರೆಯುತ್ತಾರೆ. ಬಲಿಪಾಡ್ಯಮಿಯಂದು ನಡೆಯುವ ಎಲ್ಲಾ ಆಚರಣೆಗಳು ಒಂದಲ್ಲ ಒಂದು ರೀತಿಯಲ್ಲಿ ಕೃಷಿಯೊಂದಿಗೆ ನಿಕಟ ಸಂಬಂಧವನ್ನು ಹೊಂದಿದೆ. ದೀಪಾವಳಿಯ ಮೂರು ದಿನ ಕಾಲ ಹಬ್ಬದ ಸಂಭ್ರಮದಲ್ಲಿ ತುಳುವರು ನೊಗ, ನೇಗಿಲು, ಹಾರೆ, ಪಿಕ್ಕಾಸು ಮುಂತಾದ ಕೃಷಿ ಸಾಮಗ್ರಿಗಳನ್ನು ಕೆಲಸಕ್ಕೆ ಬಳಸಲಾರರು. ಭೂ ಒಡೆಯನನ್ನು ಪ್ರತಿ ವರ್ಷ ಪ್ರೀತಿಯಿಂದ ಕರೆಸಿಕೊಳ್ಳುವ ದೀಪಾವಳಿ ತುಳುನಾಡು ಮತ್ತು ಅರೆಭಾಷೆ ಪ್ರದೇಶದಲ್ಲಿ ಸತ್ತವರೂ ಸಂಭ್ರಮಿಸುವ 'ಜನಪದ ದೀಪಾವಳಿʼ. ಇಂದು ಬತ್ತ ಬೇಸಾಯವಿಲ್ಲದ ನೆಲದಲ್ಲಿ ಆ ಕಾರಣಕ್ಕಾಗಿಯೇ ಹುಟ್ಟಿಕೊಂಡ ಹಬ್ಬಗಳ ಸ್ವರೂಪದಲ್ಲಿ ವ್ಯತ್ಯಾಸಗಳೊಂದಿಗೆ ಆಚರಣೆ ಅರಾಧನೆಗಳನ್ನು ತುಳುವರು ತಮ್ಮ ಅಸ್ಮಿತೆಯನ್ನು ಉಳಿಸಿಕೊಂಡು ಬಂದಿದ್ದಾರೆ. 

- ಭರತೇಶ ಅಲಸಂಡೆಮಜಲು

1 comment:

Greetings from Mangalore: The Cradle of Banking Excellence

Hello from Mangalore! You've probably heard in quizzes that the cradle of banking is nothing but Dakshina Kannada or Mangaluru. Mangalor...