Saturday, March 26, 2016

ಬಾ ಮಳೆಯೇ ಬಾ...

ಅವಳು ಕಾಯುತಿದ್ದಾಳೆ, ಅವನಿಗಾಗಿ ಇಡೀ ರಾತ್ರಿ, ಇಡೀ ದಿನ, ಇಡೀ ತಿಂಗಳು, ಅವಳು ಮುಡಿದ ಹೂವು ಬಾಡಿದೆ, ಹಾಲೆದೆ ಆರಿದೆ, ಶಾಂತಮೊಗೆ ನೆರಿ ಕಟ್ಟಿದೆ. ಈ ಬೇಸಗೆಯಲ್ಲಿ ಅವಳು ಕಾಮನ ಬಿಲ್ಲನ್ನೇ ನೋಡಿಲ್ಲ.

ಮತ್ತೆ ಮತ್ತೆ ಕಾಯುತ್ತಿದ್ದಾಳೆ, 
ಕಾದು ಕಾದು ಅವಿಯಾಗುತ್ತಿದ್ದಾಳೆ,
ಮಳೆ ಬರಲೇ ಇಲ್ಲ,
ನದಿ ಹರಿಯಲಿಲ್ಲ,
ಸಮುದ್ರ ಉಕ್ಕಲಿಲ್ಲ.....


ಹೌದು ಇದು ಇಳಾಳ  ಕಥೆ, ಅವಳೇನು ಅವನಿಗಾಗಿ ಸಂದೇಶ ಕಳುಹಿಸಿಲ್ಲ, ಹೊಸ ಸೀರೆ-ರವಿಕೆ ಹೊಲಿಸಿಲ್ಲ, ಮುಂದಲೆ ಬಾಚಿಲ್ಲ, ಮದುರಂಗಿ ಹಾಕಿಲ್ಲ. ಆದರೂ ಅವನು ಬರುತ್ತಾನೆ ನನ್ನ ಮೀಯುಸುತ್ತಾನೆ, ಮನ ತುಂಬಿ ಮುದ್ದಿಸುತ್ತಾನೆ, ಶೃಂಗರಿಸಿ ಕುಶಿ ಪಡುತ್ತಾನೆ ಎಂಬ ಅವಳ ಅದಮ್ಯ ಹಂಬಲ.


ಅವಳ ಅತುರವಲ್ಲ, ಬಲತ್ಕಾರವಿಲ್ಲ, ಅದು ಸಹಜ ಧರಿತ್ರಿ ಮಳೆಗಾಗಿ ಕಾಯುವ ಬಗೆ. ಕೆಡ್ಡಸ ಕಳೆದು ಋತುಮತಿಯಾಗಿದ್ರು ಮೇಘ ಬರಲೇ ಇಲ್ಲ, ಅಮ್ಮನಾಗಿ ಪೋಷಿಷಬೇಕಾದವಳು ತಾಯಿಯಾಗಲು ಕಾಯುತಿದ್ದಾಳೆ.


ಹೌದು ಕರಾವಳಿಗೆ ಬೇಸಿಗೆ ಮಳೆ ಕಾಲಿಟ್ಟಿಲ್ಲ, ಕರಾವಳಿ ಜನರೆಲ್ಲರೂ ಮಳೆಗಾಗಿ ಪ್ರಾರ್ಥಿಸುತ್ತಿದ್ದಾರೆ, ಬಿಸಿಲ ಬೇಗೆ ದೇಹವ ದಹಿಸುತಿದೆ, ಕೆಲಸವಿಲ್ಲದ ಬೆವರ ಗ್ರಂಥಿಗಳು ಸಕ್ರಿಯವಾಗಿವೆ, ನಲ್ಲೆ ಮುಡಿದ ಚೆಂಗುಲಾಬಿ ಬಾಡಿದೆ, ಪಲ್ಲಯದೊಳಗಿನ ಶೃಂಗಾರ ಮಾಸಿದೆ, ಸದ್ದಿಲ್ಲದ ಬೆಳದಿಂಗಳು ಶಾಖವಾಗಿದೆ. ಮಾವನ ಮನೆಯ ಅಡಿಕೆ ಮರ ಹಳದಿಯಾಗಿ ನೀರು ಬೇಡುತ್ತಿದೆ, ಚಿಕ್ಕಪ್ಪನ ಗದ್ದೆ ನೀರಿಲ್ಲದೆ ಮಕ್ಕಾಡೆ ಮಲಗಿದೆ. ಅಜ್ಜಿ ಮನೆಯ ಸೌತೆ ಸಣಕಲಾಗಿದೆ.  ಸರು ಮೀನು ತೋಡಿನಲ್ಲಿ ಬೆಂಕಿ ಇಲ್ಲದೆ ಬೇಯ್ಯುತ್ತಿದೆ.  ಗೇರು ಫಲ ಬಿಟ್ಟಿಲ್ಲ, ಮಾವು ನಿನೆನೇ ಕಟ್ಟಿಲ್ಲ.


ಮಳೆಯಲ್ಲಿ ಅರಳಬೇಕಾದ ಕವನಗಳು, ಮಳೆಗೆ ನೆನಪಾಗೋ ಅ  ಒಲವ ಹುಡುಗ... ಅವನ ಪ್ರೀತಿ ನಿರಾಕರಿಸಿದ ಭಾವಗಳೇ ಇರದ ಯೋಗಿಯಂತಹ  ಹುಡುಗಿ !!, ಕರಿದ ಹಲಸಿನ ಉಂಡ್ಲುಂಗ, ಕಳೆದು ಹೋದ ಮಳೆಯ ನೆನಪಲ್ಲಿ ಇಂದು ಬರಬಹುದು, ನಾಳೆಬರಬಹುದೆಂಬ ಹುಸಿ ಕನಸಿನ ರೈತ, ಜೊತೆಯಲ್ಲಿದ್ದಾಗ ಕಾಡದ ದೂರವಾದ ಮೇಲೆ ಕಾಡಿಸಿ ಕಾಡಿಸಿ ಕಾಡೋ ಈ ಮಳೆ ಹನಿ. ತಾಪಮಾನ ದಿನಂದಿನ ಏರುತ್ತಿದೆ, ಅದು ತನ್ನಿಂದ ತಾನೆ ಆಗಿ ಅವಿರ್ಭವಿಸಿದ್ದಲ್ಲ, ನಮ್ಮಿಂದಲೇ ಉಂಟಾದದ್ದು, ಮರ ಕಡಿಯುವುದು ಬಿಟ್ಟು ನೆಟ್ಟದಿಲ್ಲ, ಮನೆಯ ಎದುರಿನ ಅಂಗಳ ಸಹಜವಾಗಿ ಬಿಡದೇ ಇಂಟರ್ ಲಾಕ್ ಹಾಕಿದ್ದು,  ನಾಗಬನಗಳು ಸೈಟುಗಳಾಗಿವೆ, ನೇತ್ರಾವತಿ ತಿರುಗುತ್ತಿದ್ದಾಳೆ, MRPL ಬೆಳೆಯುತ್ತಿದೆ ಜೊತೆ ಜೊತೆಗೆ ಪುನರ್ಪುಳಿ ಶರಬತ್ತು ಕ್ಯಾನ್ ಇಂಗುತ್ತಿದೆ,  ಭೂತಕೋಲ ಕರಗುತ್ತಿದೆ. 


ಭುವಿಯ ಮಡಿಲ ತುಂಬುವ ಮುನ್ನ ತನಗಿಷ್ಟು ಇರಲೆಂದು ಹಸಿರೆಲೆ  ನೇಚಿ  ಚಾಚಿ ನಿಂತಿಹಳು ಬಾ ಮಳೆಯೇ ಬಾ... ಹೊಟ್ಟೆಹೊರೆವ ತೋಟ ಒಣಗುವ ಮುನ್ನ....


2 comments:

  1. Nimma lekhana bhoomi maleraayanige bareda love letter thara ide..!! Maleraaya odidre male gyaaaaaranty... awesome words...

    ReplyDelete

Greetings from Mangalore: The Cradle of Banking Excellence

Hello from Mangalore! You've probably heard in quizzes that the cradle of banking is nothing but Dakshina Kannada or Mangaluru. Mangalor...