Saturday, December 27, 2014

ಹೊಸ ವರ್ಷದ ಹೊಸ್ತಿಲಲ್ಲಿ ... !!

            ಹೊಸ ವರುಷ ಮೊದಲು ಆಚರಣೆಗೆ ತಂದವರು ಪ್ರಾಚಿನ ಬ್ಯಾಬಿಲೋನಿಯರು (ಈಗಿನ ಇರಾಕ್ ಪ್ರಾಂತ್ಯ ) ಎಂದು ಇತಿಹಾಸದಿಂದ ತಿಳಿದುಬರುತ್ತದೆ . ಮುಂದೆ ಕ್ರಿಸ್ತನ ಜನನದ ನಂತರ ಕ್ರಿಸ್ತಿಯನ್ ಧರ್ಮ ಉದಯಿಸಿ ರೋಮನ್ನರು ಕ್ರಿಸ್ತನ ಜನುಮ ದಿನವನ್ನೇ ಹೊಸ ವರುಷವೆಂದು ಆಚರಿಸಿದರು, ಅದೇ ನಾವಿಂದು ಸಂಭ್ರಮಿಸುವ ನವ ವರುಷ. ಒಂದು ವರ್ಷ ಕಳೆದು ಇನ್ನೊಂದು ವರ್ಷದ ಆರಂಭದ ಪದ್ಧತಿಯನ್ನು ಎಲ್ಲ ಸಂಸ್ಕೃತಿಗಳಲ್ಲೂ ಆಚರಿಸುತ್ತಾರೆ, ನಮ್ಮನ್ನು ಹೊತ್ತಿರುವ ಭೂಮಿ ಬೆಳಕು ನೀಡುವ ಸೂರ್ಯ ದೇವನನ್ನು ಪ್ರದಕ್ಷಿಸಲು ೩೬೫ ದಿನಗಳು ಬೇಕು. ಅಂದರೆ ಒಂದು ಪುನರಾವೃತಿಯಾಗುವ ಸಂದರ್ಭವನ್ನು ಸೂಚಿಸಲು ಹೊಸ ವರುಷದ ಆಚರಣೆ ಬಳಕೆಗೆ ಬಂತು ಎಂಬ ಪ್ರತೀತಿ ಇದೆ. 

               ಈ ಹೊಸ ವರುಷ ಸ್ವಾಗತಿಸಲು ಜಗತ್ತಿನೆಲ್ಲೆಡೆ ದಶಂಬರ ತಿಂಗಳ ೩೧ನೆ ರಾತ್ರಿ ೧೨ ಗಂಟೆಗೆ ಜಾಗರಣೆ ಕುಳಿತು ಸಿಡಿಮದ್ದು, ಕುಣಿತ ಪಾರ್ಟಿಗಳೊಂದಿಗೆ ಬರ ಮಾಡಿಕೊಳ್ಳುತ್ತಾರೆ. ಹೊಸ ವರುಷದ ದಿನ ಹೊಸ ಸೂರ್ಯ ಮೂಡುವುದಿಲ್ಲ , ಆತ ಎಂದಿನಂತೆ ಶಾಂತದಿಂದ ಶಾಖವಾಗುತ್ತಾನೆ, ಮತ್ತೆ ಮೆಲ್ಲನೆ ಬೆವರಿಳಿಸುತ್ತಾನೆ, ಸಂಜೆಯಾಗುತ್ತಿದ್ದಂತೆ ಶಶಿ ಉದಿಸುತ್ತಾನೆ. ಆತನಲ್ಲೂ ಬದಲಾವಣೆ ಇರುವುದಿಲ್ಲ. ಬಾನ್ದಳದ ತೋಟದಲ್ಲಿ  ಚುಕ್ಕಿಗಳಲ್ಲೂ ಬದಲಾವಣೆ ಕಾಣುವುದಿಲ್ಲ. ಪರಿಸರ ಸಹಜವಾಗಿ ತಂಗಾಳಿಗೆ ತಲೆದೂಗುತಿರುತ್ತದೆ, ಪಕ್ಕಿಗಳು ದೈನಂದಿನ ಚಟುವಟಿಕೆಗಳಲ್ಲಿ ತೊಡಗಿರುತ್ತವೆ. ನಿಸರ್ಗದೊಳಗಿನ ಮತ್ತು  ಬಾಹ್ಯಾಕಾಶದ ಯಾವ ಕ್ರಿಯೆಯಲ್ಲೂ ಬದಲಾವಣೆ ಕಂಡು ಬರುವುದಿಲ್ಲ. ಇಲ್ಲಿ ವ್ಯತ್ಯಾಸ ಕಂಡು ಬರುವುದಿದ್ದರೆ ೨೦೧೪ ಇದ್ದಲ್ಲಿ ೧೫ ಸೇರಿಕೊಳ್ಳುತ್ತದೆ, ಜೊತೆಗೆ ನಮ್ಮ ಆಯುಷ್ಯದ ಒಂದು ವರುಷ ಕಡಿಮೆಯಾಗುತ್ತದೆ ಅಷ್ಟೇ. 

           ಇನ್ನೂ ವರುಷ ಉರುಳುತಿದ್ದಂತೆ ಹಿಂದಿನ ಕಾಲವೇ ಚೆನ್ನಾಗಿತ್ತು ಇದು ಕಲಿಯುಗ , ನಡೆದಾಡಲು ಭೀತಿ , ಬದುಕಲು ಭಯ ಎಂದು ಎಲ್ಲಾ ತಲೆಮಾರಿನ ಜನ ವಂಶಪಾರಂಪರ್ಯದ ಸಿದ್ಧ ಹಕ್ಕೆಂದು ಯಾವಾಗಲೂ ಹೇಳುತ್ತಲೇ ಬರುತ್ತಾರೆ. ಅದು ಪೂರ್ಣ ಸತ್ಯವಲ್ಲ . ಕಳೆದ ದಿನಗಳಲ್ಲಿ ಅನ್ಯಾಯವಿತ್ತು ಕಾನೂನು ಇರಲಿಲ್ಲ. ಅಸಮಾನತೆ ಇತ್ತು ಹೋರಾಟವಿರಲಿಲ್ಲ , ದಬ್ಭಾಳಿಕೆ ಇತ್ತು ಪ್ರತಿರೋಧ ಇರಲಿಲ್ಲ, ಜೊತೆಗೆ   ವಿದ್ಯಾಭ್ಯಾಸ , ಆರೋಗ್ಯ , ತಂತ್ರಜ್ಞಾನ, ವೈಜ್ಞಾನಿಕತೆ ಈಗಿನ ಮಟ್ಟದಲ್ಲಿರಲಿಲ್ಲ. ಕೆಳವರ್ಗದ ಜನರ ಜೀವನ ಮಟ್ಟ ಬಲು ದುರ್ಭರವಾಗಿತ್ತು. ಹೊಸತು ಸ್ವೀಕರಿಸುವುದು ಎಂದರೆ ಸಂಕೀರ್ಣವಾದ ಸಂಕಟಗಳನ್ನು ಆಹ್ವಾನಿಸಿಕೊಳ್ಳುವುದು ಎಂದೇನೂ ಆಗಬೇಕಿಲ್ಲ. ಹಳೆಯ ಕಸವನ್ನು ತೆಗೆಯುವಲ್ಲಿ ಇರುವಷ್ಟೇ ಮುನ್ನೆಚ್ಚರ ಹೊಸ ಕಸವನ್ನು ಸೇರಿಸಿಕೊಳ್ಳುವುದರಲ್ಲಿದ್ದರೆ, ಕಸ ಜೀವನ ಒಂದು ಮಿಶ್ರಣದಂತೆ ವಿರೋಧಾತ್ಮತೆಗಳ ನಡುವೆ ಅನುಲಂಘ್ಯ ನಿಯಮಗಳನ್ನು ಮೆಟ್ಟಿ ಇಲ್ಲಿ ಚಳಿಯಿದೆ ಹಾಗಿದ್ದರೂ ಬೆಚ್ಚಗಿದೆ ಎಂಬ ಹಿತಾನುಭವಿಸಲು ಸಾಧ್ಯ . ಇದಕ್ಕೆ ಇರಬೇಕು ಕೆ.ಎಸ್ . ನರಸಿಂಹಸ್ವಾಮಿಯವರ ಈ ತುಣುಕು ಹೊಸತನದಲ್ಲಿ ಇಣುಕುತಿದೆ . 
"ಮಾವು ನಾವು , ಬೇವು ನಾವು , ನೋವು ನಲಿವು ನಮ್ಮವು 
ಹೂವು ನಾವು, ಹಸಿರು ನಾವು , ಬೇವು - ಬೆಲ್ಲ ನಮ್ಮವು 
ಹೊಸತು ವರುಷ , ಹೊಸತು ಹರುಷ , ಹೊಸತು ಬಯಕೆ ನಮ್ಮವು ...."


ಹೀಗೆ ಸಮ್ಮಿಲನತೆಯ ನವ ನವೀನತೆಯ ಸೊಬಗಿನ ಸೊಗಡು ಮೇಳೈಸುತ್ತದೆ ಎಂದು ವರ್ಣಿಸುತ್ತಾರೆ . ಹೌದು ಇಂದು ನಮ್ಮ ದೇಶದಲ್ಲಿ ಆಚರಿಸಲ್ಪಡುವ ನೂರರು ಹಬ್ಬ - ಹರಿದಿನಗಳಲ್ಲಿ ಇಂದು ಹೊಸ ವರುಷದ ಆಚರಣೆಯು ಒಂದೆಂಬಂತೆ ಸೇರಿಕೊಂಡು ಬಿಟ್ಟಿದೆ . ಬದುಕಿನ ಸುಧೀರ್ಘ ಪಯಣದಲ್ಲಿ ಕಳಕೊಂಡದ್ದು ಮತ್ತೆ ಸಿಕ್ಕಿದೆ . ಮತ್ತೆ ಸಿಕ್ಕಿದ್ದು ಕಳೆದು ಹೋಗಿದೆ ಮತ್ತೊಂದು ನವ ವರುಷದಲ್ಲಿ ಕಳೆದ ವರ್ಷ ಮತ್ತೆ ಮತ್ತೆ ಕಾಡುವ ನೆನಪಾಗಿವೆ . ಆ ಕೆಂಪು ವರ್ಣದ ಗುಲಾಬಿ ಹಸಿರು ಪರ್ಣದೊಂದಿಗೆ ಇನ್ನಷ್ಟು ಬಹುವರ್ಣಿಯವಾಗಿ ಸಿಂಗರಿಸಿ ನವೀಕರಿಸುತ್ತದೆ , ಅದರಂತೆ ನಮ್ಮಲಿರುವ ಸಂಸ್ಕಾರಯುತ , ಉಪಕಾರ ಮಾಡುವ , ಬದುಕು ಬೆಳಗಿಸುವ , ಜೀವಕ್ಕೆ ನೆರಳಾಗುವ ಜೀನ್ ಗಳಿರಬಹುದು , ಅವುಗಳೆಲ್ಲ ಬಾಹ್ಯ ಹೊಡೆತಕ್ಕೆ ಸಮಾಜದ ಏರುಪೇರಿನಿಂದ ಮುಚ್ಚಿಕೊಂಡಿರಬಹುದು . ಅವು ಎಲ್ಲವೂ ಭೃಂಗದ ಕಂಪು ಹೊರ ಸೂಸಿ ಪ್ರತಿಯೊಬ್ಬರ ಮನ ಹಣ್ಣಿನಂತೆ ಹದವಾಗಿ ಪಕ್ವವಾಗಲಿ , ನವ ವರುಷದ ಹೊಸ್ತಿಲಲ್ಲಿ ನವಭರವಸೆಯ ಪಲ್ಲಂಗವ ಹೊತ್ತು ಯಶಸ್ಸಿನ ಪಲ್ಲವಿಯ ಭಾಷ್ಯ ಬರೆಯಲಿ .... ಶುಭವಾಗಲಿ.  

Friday, December 26, 2014

ದೊಡ್ಡ ರಜೆಯ ನೆಂಪಲ್ಲಿ ...

        ವಾರ್ಷಿಕ ಪರೀಕ್ಷೆ ಮುಗಿದು ಫಲಿತಾಂಶ ಏಪ್ರಿಲ್ 10ಕ್ಕೆ ಪ್ರಕಟಗೊಂಡರೆ ನಂತರ ಮುಂಗಾರಿನ ಮಳೆಯ ಮೊದಲ ಸಿಂಚನದವರೆಗೂ ಪರ್ವಕಾಲ ದೊಡ್ಡ ರಜೆ, ಮಲ್ಲ ರಜೆ, ಬೇಸಗೆ ರಜೆ. ಮಾರ್ನೆಮಿ ರಜೆಯಲ್ಲಿ ಗಳಿಸದೇ ಉಳಿಸಿದನ್ನು  ದೊಡ್ಡ ರಜೆಯಲ್ಲಿ ಸಾಧಿಸುವ ಪ್ರಯತ್ನ. ಮೊದಲ ನೀರ ಹನಿಗೆ ಚಾತಕಪಕ್ಷಿ ಕಾಯುವಂತೆ, ಬೇಸಗೆ ರಜೆಗಾಗಿ ಕಾದು ಮೊದಲ ಅದ್ಯತೆಯೆಂಬಂತೆ ಅಜ್ಜಿಮನೆಗೆ ದಾಳಿಯಿಡುವುದು. ಹೆಚ್ಚಾಗಿ ಅಜ್ಜಿ ಮನೆಯೆಂದರೆ ಅಮ್ಮನ ಮನೆಯೇ ಆಗಿರುತಿದ್ದದ್ದು ಅಲಿಖಿತ ನಿಯಮದಂತೆ.
       ದಿನಕ್ಕೊಂದು ಪುಟ ಕಾಪಿ ಬರಿಯಿರಿ ಎಂದು ನಮ್ಮ ಸರಕಾರಿ ಶಾಲಾ ಶಿಕ್ಷಕಿ ಶೇಸಮ್ಮ ಟೀಚರ್ ನ ಅಜ್ಞಾಪಾಲಕರಾಗಿ ನಾನು  ರಜೆ ದೊರೆತ ಮೊದಲೆರಡು ದಿನಗಳಲ್ಲೇ ತಮ್ಮನಿಗೆ ಪೈಪೋಟಿ ನೀಡುತ್ತಾ, ಪುಟ ಸಂಖ್ಯೆ ನಮೂದಿಸುತ್ತಾ, 50 - 60 ಪುಟ ಬರೆದು ಅಜ್ಜಿ ಮನೆಗೆ ಹೊರಡಲು ಸಿದ್ಧರಾಗುತಿದ್ದೇವು. ಆಗ ನಮಗೆ ಬೇಕಿರುತ್ತಿದ್ದದ್ದು ತಿಂಡಿ ಮತ್ತು  ಆಟ.  ಅಪ್ಪ , ಅಮ್ಮನ ಪ್ರೀತಿಯ ಬೈಗುಳಗಳ ಹೊಡೆತ ತಪ್ಪಿಸಿಕೊಂಡು ಅಜ್ಜಿ ಮನೆ ಸೇರುವುದೆಂದರೆ ಹಾರಲು ಬಿಟ್ಟ ಹಕ್ಕಿಯಂತೆ, ತಿನ್ನಲು ಬೇಕಾದ ತಿಂಡಿ, ಅತ್ತೆ ಮಾಡುವ ಜಿಗುಜ್ಜೆ ಪೋಡಿ, ಹಲಸಿನ ಉಡ್ಲುಂಗ, ಕಟು ಕುಟು ಕೊಬ್ಬರಿ ಖಾದ್ಯ, ಬಯ್ಯಾತ ಚಾಯಕ್ಕೆ ಉಪ್ಪಡ್ ಪಚ್ಚಿಲ್, ಮರಗೆಣಸಿನ ತಿನಿಸು , ಮತ್ತೆ ಅದನ್ನು ಹಂಚುವ ಬಗೆ ಅದು ಯಾರಿಗೆ ಜಾಸ್ತಿಯಾಯಿತೋ ಅವರಿಗೆ ಅತ್ತೆ - ಅಜ್ಜಿಯ ಪ್ರೀತಿ ಜಾಸ್ತಿಯೆಂದು ಮುಗ್ಧ ಮನಸ್ಸು ಪ್ರೀತಿಯನ್ನು ತಿನಿಸುಗಳ ಮೂಲಕವೂ ಮಾಪನ ಮಾಡುವುದಿತ್ತು.
        ಆ ದಿನಗಳಲ್ಲಿ ದೂರವಾಣಿಗಳು ಹತ್ತಿರ ಸುಳಿದಿರದಿರುವುದರಿಂದ ಭಾಂದವ್ಯ ಬೆಸೆದ ಎರಡು ಮನೆಗಳ ಮನಸ್ಸುಗಳ ಸಂಬಂಧದ ಸಂಕೇತಗಳೇ ಸಂದೇಶಗಳು, ಕಾತರ ನೀರಿಕ್ಷೆಗಳು, ಸಂಜೆಯ ಬಸ್ಸಿನಲ್ಲಿ ಬರದಿದ್ದರೆ , ನಾಳೆಯ ಬೆಳಗ್ಗಿನ ಬಸ್ಸು... ಬಸ್ಸಿನ ಬರುವಿಕೆಯ ಶಬ್ಧವನ್ನು ಮೈಯೆಲ್ಲ ಕಿವಿಯಾಗಿಸಿ ಕೇಳಿ ಹಾದಿ ಕಾಯುವುದರಲ್ಲೆನೋ ಸುಖ. ಬಸ್ಸು ನಿಂತಿತೆಂದರೆ ಕತ್ತೆತ್ತಿ  ನೋಡಿ ಬಂದರು-ಬಂದರು ಎಂಬ  ಕಾಗೆ ಸುದ್ಧಿ ಮುಟ್ಟಿಸುವುದು ಮನೆಯ ಪುಟಾಣಿಗಳ ನೌಕರಿ. 
           ಅಜ್ಜಿಮನೆಯಲ್ಲಿ ಸೂರ್ಯೊದಯ ಆಗುತಿದ್ದದ್ದೆ 8 ಗಂಟೆಯ ನಂತರ ಕೂಡು ಕುಟುಂಬದ ಹಿರಿಯರೆಲ್ಲ ತಮ್ಮ ನಿತ್ಯಕರ್ಮ ಮುಗಿಸಿ ಹೊರಡುವ ಹೊತ್ತಿಗೆ ನಮ್ಮನೆಲ್ಲ ಮೆಲ್ಲಗೆ ಎಬ್ಬಿಸುತ್ತಿದ್ದರು.  ಚಾಪೆ ಹೇಗಿತೋ ಹಾಗೆ ಬಿಡಿಸಿ ಹುಸಿಕೋಪದಿಂದ ತೂರಾಡುತ್ತಾ, ಪುಟ್ಟ ಮುಷ್ಠಿ ಕೈಗಳಿಂದ ಕಣ್ಣುಜ್ಜುತ್ತಾ ತನ್ನ ಸಹ ಸವಾರನ್ನು ಸೇರುವುದು... ಮತ್ತೆ ಹಲ್ಲುಜ್ಜಲೂ ಅರ್ಧ ಗಂಟೆ, ಕೊಕ್ಕರ ಕುಳಿತು ನಿನ್ನೆಯ ವಿಚಾರಗಳಿಗೆ ನೆನೆಪಿನ ಉತ್ಸವ ನೀಡುತ್ತಾ, ಬಾಯಿಯನ್ನು  ಬಿಸಿನೀರಿನಲ್ಲಿ ಕುಳು-ಕುಳು ಮಾಡಿ ಅತ್ತೆ ದೋಸೆ ಹೊಯ್ಯುತ್ತಿದ್ದ ದಿಕ್ಕೆಲಿನ ಕಡೆಗೆ ಓಟ...   ಅದೋ ಅಪರೂಪಕ್ಕೆ ಬರುವ ರಿಕ್ಷಾದ ಶಬ್ಧ ಕೇಳಿದರೆ ಅದು ಇರುವೆಗಳು ಮಳೆಗಾಲಕ್ಕೆ ಆಹಾರ ಭದ್ರಪಡಿಸಿದಂತೆ ಕಿಂಟ್ವಾಲ್ , ಕಿಂಟ್ವಾಲ್ ಅಕ್ಕಿ ಮನೆಯ ಅಂಗಳಕ್ಕೆ ಬಂತೆಂದೇ ಅರ್ಥ...  ಮನೆಯ ಕತ್ತಲು ಕೋಣೆ ತುಂಬಿಸಲು... ನಮಗೆ ಮನದೊಳಗೆ ಖುಷಿಯೋ ಖುಷಿ ಅಕ್ಕಿ ಬಂದದಕ್ಕಲ್ಲ ಮಾವನ ದಪ್ಪ ಜೋಪು , ಸಂಗೀಸು ಚೀಲ ನೋಡಿ , ಅದರೊಳಗೆ ಮಿಸುಕಾಡುವ ತಿಂಡಿಯ ನೋಡಿ, ಅದು ಪೇಪರ್ ಮಿಠಾಯಿ, ಕೋಲು ಮಿಠಾಯಿ, ಅಕ್ರೋಟ್, ಶುಂಠಿ ಮಿಠಾಯಿ, ಬಟಾಣಿ ಕಡ್ಲೆ, ಮಿಕ್ಚರ್, ಖಾರಕಡ್ಡಿ, ಚಕ್ಕುಲಿ, ಇನ್ನೇನೋ  ಎಲ್ಲ... ಈಗಿನಂತಹ ಲೇಸ್, ಕುರುಕುರೆ, ಮ್ಯಾಗಿಗಳಿಗಿಂತೆ ವೈವಿಧ್ಯಮಯ ತಿಂಡಿಗಳು ...
        ಇನ್ನೂ ಅತ್ತೆಯಿಂದಿರ ಕಡೆಯವರೋ, ದೂರದ ಸಂಬಂಧಿಗಳು, ಬಂಧುಗಳು ಒಟ್ಟಾದರೆ ಕೇಳಬೇಕೇ? ಪರಿಚಯ ಅಗುವವರೆಗೆ ಬಾಗಿಲಿನ ಸಂದಿನಿಂದಲೋ, ನೆಲ ನೋಡುತ್ತಾ , ಮೂಲೆಯಿಂದಲೋ ನಗು, ಕೈಸನ್ನೆ ಮಾಡುತ್ತಾ , ಮತ್ತೆ ಒಂದಾದರೆ ಕೇಳಬೇಕೇ ರಜೆಯ ಗಮ್ಮತ್ತು ಬಾನೆತ್ತರದಲ್ಲಿ ಹಾರಾಡುತಿರುತ್ತಿತ್ತು . ತಿನ್ನುವುದಕ್ಕೆ, ಆಡುವುದಕ್ಕೆ ಸಮಯವೇ  ಮೋಸ ಮಾಡಿದಂತೆ ದಿನ ಉರುಳುತ್ತಿತ್ತು.  ಕೈಯಾಟ , ಚೆಂಡಾಟ, ಕುಟ್ಟಿದೋಣೆ, ಲಗೋರಿ, ಹಾಲೆಯಲ್ಲಿ ಜಾರುವುದು(ಪಾಲೆಟ್ ಒಯಿಪುನಿ ) ,ಗೋಲಿಯಾಟ , ಸೈಕಲ್ ಚಕ್ರ ಓಡಿಸುವುದು , ಬುಗರಿ ತಿರುಗಿಸುವುದು , ಗಂಗೆ ಹಿಡಿಯುವುದು (ತ್ರಿಕೋಣ ಅಕಾರ ದಲ್ಲಿ ಮಣ್ಣನ್ನು ಕೊರೆದು ಮನೆ ಮಾಡುವ ಜೀವಿಯನ್ನು ಹಿಡಿಯೋದು ) ಮನೆ ಕಟ್ಟುವುದು, ಗಿರಿಗಿಟಿ ಬೀಡುವುದು, ಸಣ್ಣ ತೊರೆ ಬದಿ ಹೋಗಿ ಬಟ್ಟೆಯಲ್ಲಿ  ಇಟ್ಟಿ(ಪುಟ್ಟ ಸಿಗಡಿ ಜಾತಿಯ ಮೀನು) ಹಿಡಿಯುವುದು, ತೆಂಗಿನ ಒಲಿಯ(ಗರಿ) ಹಾವು, ಕಲಾತ್ಮಕ ಗೂಡು, ಪೇಪರ್ ಕಪ್ಪೆ ಮಾಡುವುದು, ಕಣ್ಣಾಮುಚ್ಚಾಲೆ, ಗುರುಗುಂಞ(ಗುಲಗುಂಜಿ), ಚೆನ್ನೆಕಾಯಿ ಹೆಕ್ಕುವುದು, ಗೇರು ಮರದ ಒಯ್ಯಾಲೆ( ಅಡ್ಡ ರೆಂಬೆಯ ಮೇಲೆ ಕುಳಿತು ಮರ ಒಚ್ಚುವುದು(ಅಲ್ಲಾಡಿಸುವುದು) ), ಕೋರಿ ಕಟ್ಟ( ಕೋಳಿ ತಲೆಯಂತೆ ಇರುವ ನೀರಿರುವ ಕಡೆ ಬೆಳೆಯುವ ಸೂಜಿಯಾಕರದ ),  ಉರಿ ಮೂಡೆಗೆ ಕೋಲು ಹಾಕುವುದು(ಚಿಗಳಿ ), ಉಪ್ಪು ಮಾರುವುದು ಹೀಗೆ ನಮ್ಮ ತುಳುನಾಡಿನ  ಗೊಬ್ಬುಗಳು  ಆಧುನಿಕ ವೀಡಿಯೋ ಗೇಮ್ , ಮೊಬೈಲ್ , ಕಂಪ್ಯೂಟರ್ ಆಟಗಳಿಂದ ಹೊರತಾದ ಪಂಚಭೂತಗಳ ಓಡನಾಟದಲ್ಲಿ ಪ್ರಕೃತಿಯ ಕೊಂಡಾಟದ ಜಕ್ಕೆಲಿನಲ್ಲಿ ಕೂಸುಗಳಾಗಿ ಮೈಮರೆಯುವ ಆಟಗಳಾವು.




            ಮತ್ತೆ ಹಟ್ಟಿಯಿಂದ ದನಗಳನ್ನು ಬಿಟ್ಟು ಕೋಲು ಹಿಡಿದು  ಹಿಂದಿನಿಂದ ಓಡಿಸುವುದು, ಅಜ್ಜಿ ಗೌರಿ ದನ ಕೋಪದಿಂದ ತಿರುಗುವುದು, ಗೇರು ಹಣ್ಣು ಕೀಳಿ , ಬೀಜವನ್ನು ಕುಂಟಾಗೆಗೆ ಹಾಕಿ ಹಣ್ಣನ್ನು ಬೆನ್ನಿಗೆ ಬಿಸಾಡುವುದು, ಕುಂಟಾಲ ಹಣ್ಣಿಗೆ ಕಲ್ಲು ಬಿಸಾಡುವುದು ಹೀಗೆ ಇವುಗಳೇ ಪ್ರತಿದಿನದ ದಿನಚರಿ... ತೋಟದಲ್ಲಿ ಅತ್ತಿಂದಿತ್ತ ಆಡ್ಡಾಡಿದರೆ ಸಾಕು ಹೊಟ್ಟೆಗೆ ಏನಾದರೊಂದು ಬೀಳುತ್ತಿತ್ತು, ಅದಕ್ಕೆ ಹುಳಿಯಾವುದು- ಸಿಹಿಯಾವುದೆಂದು ಗೊತ್ತಾಗದ ರೀತಿಯಲ್ಲಿ ಚವೀಕಾಯಿ, ಕುಂಟಲ ಹಣ್ಣು,  ಕೇಪುಲ ಹಣ್ಣು , ಚೂರಿಕಾಯಿ, ಪೇರಳೆ, ಕೊಟ್ಟೆತ ಪರ್ ಂದ್, (ಕೊಟ್ಟೆ ಹಣ್ಣು) ಪುರ್ನಪುಳಿ, ಕಾರೇಕಾಯಿ, ಮಾವು, ಸರೋಳಿ ಕಾಯಿ, ಹೀಗೆ, ಹೀಗೆ ಏನೆಲ್ಲ ತಿನ್ನಬಹುದೆನೋ ಅದೆಲ್ಲ ಹೊಟ್ಟೆರಾಯನಿಗೆ ಕಪ್ಪ ಕಾಣಿಗೆಯಾಗುತಿತ್ತು. ಕೆಲವು ದಿನಗಳು ಹಪ್ಪಳ ಸಂಡಿಗೆಗೆ ಮೀಸಲು ಹಿಂದಿನ ದಿನ ಕತ್ತಲು ಕವಿಯುತಿದ್ದಂತೆ ಬಡ್ಡ ಸೀಮೆಎಣ್ಣೆ ದೀಪವನ್ನು ಮಧ್ಯದಲ್ಲಿ  ಇಟ್ಟು ಸುತ್ತಲೂ  ಕುಳಿತು ರಚ್ಚೆಯಿಂದ ಹಲಸಿನ ತೊಳೆಗಳನ್ನು ಬಿಡಿಸುವುದು... ಕೈಗೆ ತೆಂಗಿನ ಎಣ್ಣೆಯ ಲೇಪ ಹಾಕಿ ಅಂಗಿ ಚಡ್ಡಿಯಲ್ಲೆಲ್ಲ ಅಂಟು ಅಂಟಿಸಿಕೊಂಡು, ಬಾಯಿಗೂ ಕೆಲಸ ಕೊಡುತ್ತಾ ಕೈಗೂ ಕೆಲಸ ಕೊಡತ್ತಾ ಪ್ರಾಥಮಿಕ ತಯಾರಿ ಮುಗಿಸಿ ಆಯಾಸದಿಂದ ಗಡ್ಡದಾಗಿ ನಿದ್ದೆ ಮಾಡಿದರೆ ಮರುದಿನ ಬೆಳಗ್ಗೆ ಘಮಘಮ ಹಲಸಿನ ಪರಿಮಳ, ಕಡೆಯುವ ಕಲ್ಲಿನ ಗುಡು ಗುಡು ಸದ್ದು  ನಮ್ಮನ್ನು ಎಬ್ಬಿಸುತಿತ್ತು. ಒಲಿಯ ಚಾಪೆನ್ನು ನೀರಲ್ಲಿ ನೆನೆಸಿ, ಬಿಡಿಸಿ, ಮಣೆಗಳನ್ನು ಇಟ್ಟು ತಯಾರಾಗುವುದರೊಳಗೆ ಅಜ್ಜಿಯ ಕೈಯಲ್ಲಿ ನಿಂಬೆ ಗಾತ್ರದ ಉಂಡೆಗಳು ಸಿದ್ಧ... ಮತ್ತೆ ಉಂಡೆ ಒತ್ತುವ ಕೆಲಸ ಮಕ್ಕಳಲ್ಲಿ ಹಿರಿಯವನಿಗೆ ಅದರಲ್ಲೂ ಕೆಲವೊಮ್ಮೆ ಪೆಟ್ಟು-ಗುಟ್ಟು ನಡೆಯುತ್ತಿತ್ತು. ಪುಟಾಣಿಗಳಿಗೆ ಮಾಡಿಕೊಟ್ಟ ಅಮೀಬಾ-ಚಂದ್ರನನ್ನು ನಾಜೂಕಾಗಿ ಚಾಪೆಯಲ್ಲಿ ಹರಡುವ ಕೆಲಸ, ಮತ್ತೆ ಪ್ಲಾಸ್ಟಿಕ್ ನಲೋ, ಮಣೆಯಲ್ಲೋ ಅಪ್ಪಚ್ಚಿಯಾದ ಹಸಿ ಹಪ್ಪಲದ ತುಣುಕು ತಿಂದು ರುಚಿ ನೋಡುವ ಕೆಲಸ ಮೇಲಿಂದ ಮೇಲೆ ನಡೆಯುತ್ತಾ ಇರುತಿತ್ತು... ಮುಂದಿನದು ಹಿರಿಯರ ಕೆಲಸ ಹೆಂಚಿನ ಮಾಡಿನ ಮೇಲೆ ನಾಯಿ, ಕೋಳಿ ಸಿಗದ ಜಾಗದಲ್ಲಿ ಇಟ್ಟು , ಹಳೆಯ ಮೀನಿನ ಬಲೆ ಸಿಕ್ಕಿಸಿ ಕನ್ನಡಿ ಇಟ್ಟು ಕಾಗೆಯಿಂದಲೂ ರಕ್ಷಿಸುವುದು. ಇಷ್ಟು ಆಗುವಾಗ ಮಧ್ಯಾಹ್ನದ ಕೋಳಿ ನಿದ್ದೆ ಮುಗಿಸಿ ಸಂಜೆಯಾಗುತಿತ್ತು.
           ಮತ್ತೆ ನಮ್ಮೊಳಗೆಯೇ ಒಪ್ಪಂದವಾಗಿ ಹತ್ತಿರದ ಮನೆಗಳಿಗೆ ದಾಳಿಯಿಡುವುದು ಇರುತ್ತಿತ್ತು. ಅಲ್ಲಿಯೂ ತಿಂಡಿಗಳದ್ದೇ ಕಾರುಬಾರು.... ಸಂಜೆ ಸೂರ್ಯ ಇಳಿಯುವಾಗ ನಮ್ಮ ಹೊಟ್ಟೆಗೂ , ಮನಸ್ಸಿಗೂ ಖುಷಿ.
              ಆಗಾಗ ಅಜ್ಜೆರ್ ನ ಅಂಗಡಿಗೆ ಹೋಗಿ, ಬಾಲಮಂಗಳ , ತುಂತುರು, ಚಂಪಕ ಮತ್ತು ಅತ್ತೆಯ ಮಂಗಳ ಗಳ ಜೊತೆಗೆ ಚಾಕಲೇಟು ತಂದು ಹಂಚಿ ಮೊದಲು ಡಿಂಗನ ಕತೆ, ಮತ್ತೆ ಲಂಬೋದರನ ಶಕ್ತಿಯ ಪರಿಚಯವಾದ ನಂತರ ಉಳಿದ ಕತೆಗಳತ್ತಾ ಕಣ್ಣು ಹಾಯಿಸೊದು... ಸಂಜೆ ಚಾಯಕ್ಕೆ ಅವಲಕ್ಕಿ ಮಾಡಿದರೆ ಅತ್ತೆಯ ಅರ್ಥವಾಗದ ಮಂಗಳದ ಧಾರವಾಹಿಗಳ ಪುಟಗಳನ್ನು ಪೊಟ್ಟಣ ಮಾಡಿ ಹಂಚುವುದು ನಡೆಯುತ್ತಿತ್ತು.
        ಇನ್ನೂ ಬೇಸಗೆ ಅಂದರೆ ಕೇಳಬೇಕೇ ನಮ್ಮ ತುಳುನಾಡಿನಲ್ಲಿ ದಿನಾಲೂ ಎಂಬಂತೆ ಜಾತ್ರೆ, ಮದುವೆ, ನೇಮ, ಒತ್ತೆಕೋಲ, ಕಂಬುಲ,  ಪೂಜೆ, ಆಟಾ, ಹುಡುಗಿ ನೋಡಲು ಹೋಗುವುದು, ಸೀಮಂತ ಹೀಗೆ... ಮನೆಯವರೊಂದಿಗೆ ಪುಟ್ಟ ಪಿಕಲಾಟದ ಕಪಿಸೈನ್ಯವೂ ರಕ್ಷಣೆಗೂ ಆಗುತ್ತದೆ, ಭಕ್ಷಣೆಗೂ ಆಗುತ್ತದೆ ಎಂದು ಹೊರಡುತ್ತಿತ್ತು.ನನಗೆ ಇಷ್ಡವಾಗುತ್ತಿದ್ದ ಕಾರ್ಯಕ್ರಮವೆಂದರೆ ಬೊಜ್ಜ ಮತ್ತು ಸೀಮಂತ ಇವೆರಡು ಸಾವು ಹುಟ್ಟುಗಳ ಬಂಧವಾದ್ರು ಇವೆರಡರಲ್ಲಿಯು ತಿಂಡಿಯ ಪೊಟ್ಟಣ ಸಿಗುತ್ತದೆಯೆಂದೂ ನಾನು ತಪ್ಪದೇ ಹೋಗುತ್ತಿದ್ದೆ.
            ದಿನ ಬಿಟ್ಟು ದಿನ ಬರುವ ನೆಂಟರಿಷ್ಟರು, ಸ್ನೇಹಿತರು, ಪೊಸ ಮಾದಿಮಯೇ-ಮಾದಿಮಾಲ್ ಗಳಿಗೆ ಸಮ್ಮಾನ ಮತ್ತೆ ಆ ತಿಂಡಿ, ತಿಂಡಿ ಪೊಟ್ಟಣ ಆಗಾಗ ಕಾಡುತ್ತದೆ. ಒಂದು ಬೇಸಗೆ ರಜೆಯಲ್ಲಿ 23 ಊರ ಕೋಳಿ ತಿಂದ ದಾಖಲೆಯೂ ಇದೆ ಎಂದರೆ ಇಂದು ನನಗೂ ಅಶ್ಚರ್ಯವಾಗುತ್ತಿದೆ. ಈ ಬಾಲ್ಯದ ಜೀವನ ನೆನಪಿಸಿದರೆ ಅದೆನೋ ಖುಷಿ.
ಇಂದಿನ ಪುಟಾಣಿಗಳಿಗೆ ದೊಡ್ಡರಜೆ ಸಜೆಯಂತೆ ಭಾಸವಾಗುತ್ತಿದೆಯೋ ಏನೋ... ಬಿಸಿಲಿಗೆ ಹೋದರೆ ಕಪ್ಪಾಗುತ್ತಿ.. ಮಣ್ಣಿನಲ್ಲಿ ಆಡಿದರೆ ರೋಗ ಬರುತ್ತದೆ ಎಂದು ನನ್ನ ಸೋದರ ಸೋದರಿಯರು ತಾವಾಡಿದ , ತಿಂದ ತಿನಿಸುಗಳ ಮರೆವಿನ ಮರೆಯಿಂದ ತಮ್ಮ ಮಕ್ಕಳಿಗೆ ಉಪದೇಶ ನೀಡುತ್ತಾರೆ... ಇಂದು ದೊಡ್ಡ ರಜೆ ಹೆಸರಿಗೆ ಮಾತ್ರ ಆ ಕೋಚಿಂಗ್, ಈ ಕ್ಲಾಸ್ಸು , ಬೇಸಗೆ ಶಿಬಿರ , ಇನ್ನೊಂದು , ಮಗದೊಂದು ಮಣ್ಣಂಗಟ್ಟಿ ಅದು ಇದು ಎಂದು ಮಕ್ಕಳನ್ನು ಮಕ್ಕಳಾಗಿಸದೇ ಪ್ರಬುದ್ಧರಾನ್ನಾಗಿಸಲು ಹೊರಟಂತಿದೆ. ಆ ಅಜ್ಜಿ ಮನೆ, ಗೇರು ತೋಪು, ತೆಂಗಿನ ಗೆರಿ, ಕುಂಟಲಾ ಹಣ್ಣು ಎಲ್ಲವೂ ಈಗಲೂ ಇದೆ. ಅದರೆ ಒಂದಷ್ಟು ಅಂಕೆ ಸಂಖ್ಯೆಗಳಲ್ಲಿ ಇಳಿದಿರಬಹುದು, ಸುಣ್ಣ ಬಣ್ಣ ಬಳಿದ ಅಜ್ಜಿ ಮನೆ ಸುಂದರವಾಗಿರಬಹುದಷ್ಟೇ,  ಬಾಲ್ಯವೆಂಬುವುದು ವ್ಯಕ್ತಿಯ ಜೀವನದಲ್ಲಿ ಒಮ್ಮೆ ಮಾತ್ರ ಬರುವುದು ಮತ್ತೆಂದು ಅವಕಾಶ ನೀಡದು, ಖಂಡಿತ ವ್ಯವಸ್ಥೆಗೆ ಹೊಂದಿಕೊಳ್ಳಬೇಕು, ಅದರೆ ಅವ್ಯವಸ್ಥೆಯನ್ನೇ ವ್ಯವಸ್ಥೆಯೆಂದು ತಿಳಿದು ರೂಢಿ ಮಾಡಿದರೆ ಯಾಕೋ ತಪ್ಪೆನಿಸುತ್ತದೆ. ಇದರ ಬಗೆಗೆನೇ  ಯೆಮಾನಿನ ಕವಿ ಖಲೀಲ್ ಜಿಬ್ರನ್ ಹೀಗೆ ಹೇಳುತ್ತಾನೆ 
"ನಿಮ್ಮ ಮಕ್ಕಳು ನಿಮ್ಮ ಮಕ್ಕಳಲ್ಲ , 
ಅವರು ನಿಮ್ಮೊಂದಿಗೆ ಬಂದಿರಬಹುದು, ಆದರೆ ನಿಮ್ಮಿಂದ ಅಲ್ಲ 
ಅವರು ನಿಮ್ಮ ಜೊತೆಗಿರಬಹುದು , ಆದರೆ ಅವರು  ನಿಮ್ಮ ಸ್ವತ್ತಲ್ಲ , 
ಅವರಿಗೆ ನಿಮ್ಮ ಪ್ರೀತಿ ನೀಡಬಹುದು , ಅದರೆ ವಿಚಾರಗಳನ್ನಲ್ಲ ,
ನೀವು ಅವರ ದೇಹಕ್ಕೆ ಆಶ್ರಯ ನೀಡಿರಬಹುದು , ಅವರ ಅತ್ಮಕಲ್ಲ,
ಅವರಂತಾಗಲು ನೀವು ಪ್ರಯತ್ನಿಸಬಹುದು , ಆದರೆ ಅವರು ನಿಮ್ಮಂತಿರಲು ಬಯಸುವುದು ಬೇಡ ,
ಏಕೆಂದರೆ ಜೀವನ ಹಿಂದಕ್ಕೆ ಚಲಿಸದು , ನಿನ್ನೆಯಲ್ಲಿ ಬದುಕದು ,
ನೀವು ಬಿಲ್ಲಿನಂತೆ, ಅವರು ನಿಮ್ಮಿಂದ ಚಿಮ್ಮಿದ ಜೀವಂತ ಬಾಣಗಳು. "
       ಬಾಲ್ಯದಲ್ಲಿ ಬಾಲರು ಬಾಲರಾಗಿಯೇ ಇರಲಿ , ಅವರು ಪ್ರಬುದ್ಧರಾಗುವುದೂ ಅವರಿಗೂ ಶ್ಷೋಭೆಯು ಅಲ್ಲ. ನಿಮ್ಮ ಮುದ್ದು ಕೂಸುಗಳಿಗೆ ಬಾಲ್ಯ ಕೊಡಿ, ದೊಡ್ಡ ರಜೆ ಅನುಭವಿಸಲು ಬಿಡಿ, ಮುಂದೆಂದದಾರೂ ನನ್ನಂತೆ ಅವರನ್ನೂ ಬೇಸಗೆ ರಜೆ ನೆನಪಿಸಬಹುದು.

(ಸುದ್ಧಿ ಬಿಡುಗಡೆ ಸುಳ್ಯದಲ್ಲಿ ಪ್ರಕಟವಾದ ಲೇಖನ )
ಸುದ್ಧಿ ಬಿಡುಗಡೆ

Tuesday, December 23, 2014

ಅಮಾವಾಸ್ಯೆ ..!!

ಕೊಳದಲ್ಲಿ
ಹಂಸ
ಚಂದಿರನೊಂದಿಗೆ
ಚಿಣ್ಣಾಟವಾಡುತಿದೆ...
ಪುಟ್ಟ ಅಲೆಗೆ ಸಿಲುಕಿದ
ಚಂದಿರ ಚೂರು ಚೂರು
ಗಲಿಬಿಲಿಗೊಂಡು
ಹಂಸ
ಬೆಳ್ಳಿಯ
ಬಟ್ಟಲ ತುಂಡೆಂದು
ಹಸಿವಿನಿಂದ
ಹೆಕ್ಕಿ ತಿಂದಿತ್ತು...
ಕಾಯುತಿದೆ
ಮತ್ತೆ ಮುಂದಿನ
ಮುಸ್ಸಂಜೆಗೆ...
ಶಶಿ
ಬರಲೇ
ಇಲ್ಲ ...!
ನಿನ್ನೆಯ
ನೆನೆದು
ಹಂಸ
ಬಿಕ್ಕಿತ್ತು..!!


ಕನ್ನಡದಲ್ಲಿ ನನ್ನವಳ ಸೌಂದರ್ಯ ವರ್ಣಿಸೋದು...

ಕನ್ನಡದಲ್ಲಿ ನನ್ನವಳ ಸೌಂದರ್ಯ ವರ್ಣಿಸೋದು... ಚಿನ್ನ , ರನ್ನ , ಮುತ್ತು, ಮುದ್ದು ಅಂತಿರಲ್ಲ ಅದರಂತೆ  ತಾವೂ  ನಿಮ್ಮವರನ್ನು  ವರ್ಣಿಸಿ ಕುಶಿ ಆಗಬಹುದು, 

ಮುಖಹೊತ್ತಗೆಯ ಕಾಜಾಣ ಮಿತ್ರರಿಂದ ಎರವಲು ಪಡೆದದ್ದು. ನೀವೂ ನಿಮಗೆ ಗೊತ್ತಿರುವುದನ್ನು ಸೇರಿಸಿ ನಾನು ತಿಳಿದು ಕೊಳ್ಳುತ್ತೇನೆ.  

1.ಕಣ್ಣಿಗೆ ಅಂಜನ ಹಾಕ್ಕೊಂಡು ಹುಡುಕಿದ್ರೂ ಇಂಥವಳು ಸಿಗೋಲ್ಲ.
2.ಹತ್ತು ಜನರಲ್ಲಿ ಎದ್ದು ಕಾಣುವಳು.
3.ಹಾಲಲ್ಲಿ ತೊಳ್ದಂಗವ್ಳೆ, ಹಲಸಿನ ತೊಳೆ ಇದ್ದಂಗವ್ಳೆ.
4.ನಾಕು ಜನ ತಿರುಗಿ ನೋಡೋ ಸೌಂದರ್ಯ ಅವಳದು. 
5.ರಂಭೆ ರಂಭೆ ಹಾಗಿದ್ದಾಳೆ.
6.ಕಬ್ಬಿನ ಜಲ್ಲೆ ಹಾಗೆ ವಯ್ಯಾರಿ . 
7.ಪೊರೆ ಕಳಚಿರೋ ಮಿಡಿನಾಗಮ್ಮನ ಹಾಗೆ ಮಿರಿ ಮಿರಿ ಅಂತಿದ್ದಾಳೆ. 
8.ಬೆಣ್ಣೆ ಬೆಣ್ಣೆ ಹಂಗಿದ್ದಾಳೆ.
9.ಎದೆಯಲ್ಲಿ ಅವಲಕ್ಕಿ ಕುಟ್ಟೋ ಹಂಗೆ ಹೆಜ್ಜೆ ಹಾಕ್ತಾಳೆ. 
10.ಮೊಲ್ಲೆ ಹೂ ಮಾಲೆ ಹಂಗವಳೆ. 

11.ಗೊನೆ ಬಿದ್ದಿರೋ ಬಾಳೆ ಥರ ಸಿಂಗಾರಿ. ಸಾಕ್ಷಾತ್ ಲಕ್ಷ್ಮೀ... 
12.ಪೆಡ್ದೆ ಹಸು ಹಂಗೆ ಗಡಬಡಿಸ್ಕೊಂಡಿರುತ್ತೆ.. 
13.ಮುಟ್ಟಿದ್ರೆ ಕೊಳೆ ಹತ್ತುತ್ತೆ.. ನೋಡಿದ್ರೆ ದೃಷ್ಟಿ ತಾಗುತ್ತೆ, 
14.ಬೆಳ್ದಿಂಗಳಿಗೂ ಬಾಡ್ತಾಳೇನೋ ಅನ್ನೋ ಹಂಗಿದ್ದಾಳೆ
15.ಭಗವಂತನಿಗೆ ತುಂಬಾ ಪುರುಸೊತ್ತು ಇತ್ತೇನೋ, ಕಣ್ಣು, ಮೂಗು, ಬಾಯಿ ತಿದ್ದಿತೀಡಿ ಬರೆದಹಾಗೆ ಇದ್ದಾಳೆ.
16.ಹುಡುಗಿ ಒಳ್ಳೆ ಚಂದನದ ಗೊಂಬೆ ಇದ್ದಹಾಗೆ ಇದ್ದಾಳೆ.
17.ಸುರ ಸುಂದರಿ, ಮುಟ್ಟಿದ್ರೆಲ್ಲಿ ನಲುಗ್ತಾಳೊ ಅನ್ನೊಹಾಗಿದ್ಲು.. ,
18.ಐದು ಮಲ್ಲಿಗೆ ತೂಕದವಳು, 
19ದಂತದ ಬೊಂಬೆ, 
20.ನಕ್ಕರೆ ಬೆಳದಿಂಗಳು ಚೆಲ್ಲಿದ ಹಾಗೆ, 
21.ನಡೆದರೆ ಮಯೂರ ನರ್ತನ, ಹಾಡಿದರೆ ಗಂಧರ್ವ ಗಾನ.
22.ಅವಳನ್ನು ಕೈ ತೊಳೆದು ಮುಟ್ಟಬೇಕು. 

Sunday, December 21, 2014

ಬೆಳಕ ತೋರೋ ಹರಿಯೇ...



ಜಗದ ಡೊಂಕ ಕಳೆಯಲು
ಬಾಗಿಲೆಲ್ಲಿದೆ ಗೋಲಕೆ..?
ತೋರೋ ಹರಿಯೇ, ಮನದ ಗೋಡೆಗೆ,
ತಿಮಿರದ ಬಾಗಿಲ...
ಹೃದಯ ಕವಾಟವ ತೆರೆದು,
ಮಲಿನ ಜೀವ-ಜಲವ ಶುದ್ಧಿ ಸಿದ್ಧಿಸಿದಂತೆ,
ಮಾಡೋ ಹರಿಯೇ, ನನ್ನ ಮನದ ಜೀವವಾಯುವ.
ಪಾಪ-ಪುಣ್ಯಗಳ ಭ್ರಾಂತಿ
ಜನನ ಮರಣದ ವರ್ತುಲಗಳ ಭೀತಿ.
ತೋರೋ ಹರಿಯೇ, ಪರಿಪೂರ್ಣ ಛಾಪು ಈ ಜೀನಕೆ
ಶಾಂತಿಯ ಕಾನನದಲ್ಲಿ ಕಾಣದ ಆತ್ಮನ ಬಾಣ,
ಅವಿರ್ಭಾವ ಅವಭೃಥ ಅಮೃತದ ಸ್ನಾನ.
ಮಾಡೋ ಹರಿಯೇ, ಇವನ್ನೇ ಕುಡಿಸಿ ಜಾಣರ ಜಾಣ
ಹಸಿರು ಮರದಲ್ಲಿ ಐಕ್ಯವಾಗಿ ಬಾಳುವುದು ಬೆಂಕಿ
ಸಖ್ಯದಿಂದಲೇ ಮಾಡುವುದುಬೂದಿ, ಕುದಿಯುವುದು ಮನ,
ಆರಿಸೋ ಹರಿಯೇ ಮನದ ಮಾನಕಷಾಯದ ಬೆಂಕಿಯ.
ಸಂಕಟದ ಬುತ್ತಿಯ ತುಂಬ ಅಗುಳು ಸುಡುವುದು,
ಹೃದಯ ಗೋಡೆಯ ಮೇಲೆ ಅದು ಉಷ್ಣ ಬಿಡುವುದು
ತೋರೋ ಹರಿಯೇ ಸ್ಪಷ್ಟ ದೃಷ್ಠಿಯ ಸೃಷ್ಠಿಯ ಹಾದಿಯ...
ಒಡೆದ ಸಂದಿನಿಂದ ಬಳಿತ ಬೆಳಕು
ಕೋಣೆಯ ಕತ್ತಲ ಮಿಟುವುದು.
ತೋರೋ, ಹರಿಯೇ ಕತ್ತಲ ಭಾವಕೆ ದೀಪದ ಬಿಂಬವ
ವಿಕಾರವ ಕಡೆದು ವಿಕಾಸವ ಹಡೆದು
ತಾ ಹರಿಯೇ ಅಂತರಂಗದ ಅರ್ಮೂತಕೆ ಬೆಳಕ....

Saturday, December 13, 2014

ನನ್ನಮ್ಮ .

"ಕಾಣದ ದೇವರು ಊರಿಗೆ ನೂರು , ಕಾಣುವ ತಾಯೇ ಪರಮ  ಗುರು " ಹೌದು ಗರ್ಭ ಕಟ್ಟಿದಂದಿನಿಂದ ತಾಯಿಯೊಂದಿಗಿನ ಅನೂಹ್ಯ ಸಂಬಂಧದ ಎಳೆಕವಲೊಡೆದು , ಬರೀ ಕಣ್ಣಿಗೆ ಕಾಣುವ , ಭಾವಿಸಿದಷ್ಟು ಮುಗಿಯದ, ಮರೆಯದಷ್ಟು ಸ್ಮೃತಿಗಳು, ಒಂಬತ್ತು ತಿಂಗಳ ಕಾಲ ಅಮ್ಮನುಂಡರೆ ನನಗೆ ತೃಪ್ತಿ, ಅಮ್ಮ ಉಸಿರಾಡಿದರೆ ನನಗೆ ಉಸಿರು, ಅದೇ ಇಂದು ನಾನುಂಡರೆ ಅಮ್ಮನಿಗೆ ತೃಪ್ತಿ . ನಾನು ಚೆಲುವಲ್ಲಿದ್ದರೆ ಅಮ್ಮನಿಗೆ ಖುಷಿ,  ಏನೋ ಈ ಪ್ರಾಕೃತಿಕ ಬಂಧನ ಜೀವ ಜೀವಗಳ ನಡುವೆ ಉಲ್ಲಾಸದ ಬತ್ತಿಯಂತೆ ಅಲ್ಲಾಡುತ್ತಿದೆ. 

ತುತ್ತು ತಿನ್ನಲು ಹಠತೊಟ್ಟರೆ ಮುತ್ತು ನೀಡುತ್ತಾ, ಅಪ್ಪನನ್ನೇ ಆನೆ ಮಾಡಿ ನನ್ನ ಅಂಬಾರಿಯಂತೆ ಕೂರಿಸಿ ಏನೆಲ್ಲಾ ಆಟ ಆಡಿಸಿ ಚಂದಮಾಮನ ಕೊಡಿಸೋ ಆಸೆ ತೋರಿಸಿ ನನ್ನ ಕಿಲ ಕಿಲ ನಗುವಲಿ ಆ ನಗುವ ನಡುವಲಿ ತುತ್ತು ತಿನ್ನಿಸಿ ಏನೆಲ್ಲಾ ಸಂತಸವ ಕಾಣುತ್ತಿದ್ದೆ ಆಲ್ವಾ. "ಕುಕ್ಲು ಬಾಬೆ ಕುಕ್ಲು" ಅಂತ ಹೇಳಿ ತಲೆ ಅಲ್ಲಾಡಿಸುವುದನ್ನು , ತಿರುಗಿಸುವುದನ್ನು ನೋಡುವ ನಿನ್ನ ಕುಶಿ, ಅಲ್ಲೆಲ್ಲೋ ಪುಟ್ಟ ಹೆಜ್ಜೆಗಳಿಗೆ ಬಲವಿಲ್ಲದೇ  ಬಿದ್ದರೆ ಕುಂಡೆಗೆರಡು ಪೆಟ್ಟು ಕೊಟ್ಟು ಎಬ್ಬಿಸುತ್ತಿದ್ದ ನಿನ್ನ ಅರೈಕೆ, ಮಣ್ಣುನ್ನು ತಿನ್ನಲೋ , ಜಗಲಿಯಲ್ಲಿ ಇದ್ದ ಕೋಳಿ ಹಿಕ್ಕೆಯ ಹಿಂದೆ ಹೋದರೆ "ಬಜೀ ಕೊಳಕು ಬಾಲೆ"  ಅಂಥ ಮುದ್ದಿಸುತಿದ್ದದ್ದು, ಸೂಜಿ ಕೊಟ್ಟರೆ ನೀನಗೆನೆ ನನ್ನಿಂದ ಜಾಸ್ತಿ ನೋವಾಗೋದು, ಮತ್ತೆ ಹೆಚ್ಚಾಗಿ ನಾನು ಕೇಳುವ ಮೊದಲೇ ನಿನಗೆ ನನ್ನೆಲ್ಲ ಬೇಕು ಬೇಡಗಳೆಲ್ಲಾ ಗೊತ್ತಾಗಿ ಬಿಡುತಿತ್ತು, ಹೌದು ಇದು ಆ ಮಧುರ ಭಾಂದವ್ಯದ ಕುರುಹುಗಳು. 

ನನ್ನಮ್ಮ ನಸುಕಿನಲ್ಲೆದ್ದು ಸೂರ್ಯನನ್ನೇ ಎಬ್ಬಿಸಲು ಹೊರಡುವವಳು , ತುಳಸಿ ದೇವಿಗೆ ಸುತ್ತು ಬಂದು ಬಿಂದಿಗೆ ನೀರು ಸೇದಿ , ದಿನಚರಿಗೆ ಹಾಜರಿ ... ಅಮ್ಮನ ಕಡೆಯುವ ಕಲ್ಲು ಗಡ - ಗಡವೆಂಬ ಸದ್ದು ಮತ್ತು ಮಂಗಳೂರು  ಆಕಾಶವಾಣಿಯ ಸುಪ್ರಭಾತದ ಜುಗಲ್ ಬಂಧಿಯೊಂದಿಗೆ ನನ್ನನ್ನು ಎಬ್ಬಿಸುತ್ತಿತ್ತು. ಅರೆ ಬಿಸಿ ಮಾಡಿದ  ತಂಗಳನ್ನ ಮತ್ತು ಮೊಸರಲ್ಲಿ ನಮ್ಮನ್ನು ಉಣ್ಣಿಸಿ, ಗಡಿ ಬಿಡಿಯಲ್ಲಿ ಅಪ್ಪನಿಗೆ ಪೋದಿಕೆ  ಕಟ್ಟಿ , ಆಗ ತಾನೇ ಸಿದ್ದವಾದ ಪದಾರ್ಥ ಮತ್ತೆ ಕುಚ್ಚಲಕ್ಕಿ ಅನ್ನ ವನ್ನು ನಮ್ಮ ಶಾಲೆಯ  ಚಿಣ್ಣ  ಚಿಣ್ಣ ಬುತ್ತಿಗಳಿಗೆ  ತುಂಬಿಸಿ ಪ್ಲಾಸ್ಟಿಕ್ ಲಕೋಟೆಯಲ್ಲಿ ಕಟ್ಟಿ ಹೊರಡಿಸುವುದರಲ್ಲಿ ಅಮ್ಮನ ಬೆಳಗಿನ  ಸಂಭ್ರಮ ಕಳೆಯುತ್ತಿತ್ತು .
ಅಮ್ಮ 
ಹಾಗೆ ನೋಡಿದರೆ ಅಮ್ಮನೇ , ಅಪ್ಪನಿಗಿಂತ ಬಲು ಜೋರು , ಮದೆರ್ ಬೆತ್ತ , ಗಾಳಿಯ ಅಡರ್ ಗಳಲ್ಲಿ ಪೆಟ್ಟು ಕೊಡುವುದರಲ್ಲಿ ಇರಬಹುದು, ಬೈಯುವುದರಲ್ಲಿ ಇರಬಹುದು , ಜೀವನ ಸೂಕ್ಷ್ಮಗಳನ್ನೂ ಹೇಳಿಕೊಡುವುದರಲ್ಲಿ ಇರಬಹುದು, ಕೋಳಿ ಸಜ್ಜಿ ಮಾಡುವುದರಲ್ಲಿ ಇರಬಹುದು, ಕಾಟ್ ಹಾವನ್ನು ಓಡಿಸುವದರಲ್ಲಿ ಇರಬಹುದು, ದಿಟ್ಟ, ನೇರ ವಿಷಯಗಳಿಂದ ನಿಷ್ಠುರ ಅದದರಲಿರಬಹುದು, ಯಾರದೋ ಗಾಳಿ ಮಾತನ್ನು ಕೊಂಡೆ ಕಿವಿ ಮಾಡಿ ಕೇಳುವುದರಲ್ಲಿ ಇರಬಹುದು, ಅತಿಥಿಗಳನ್ನೂ ಸತ್ಕರಿಸುವುದರಲ್ಲಿ ಇರಬಹುದು, ದೊಡ್ಡ ಕನಕಿನ ಕಟ್ಟ ತರುವುದರಲ್ಲಿ ಇರಬಹುದು,  ಅಜ್ಜಿ ಕತೆ ಹೇಳುವುದರಲ್ಲಿ ಇರಬಹುದು , ಬಯ್ಯತಾ ಚಾಯಕ್ಕೆ ಕುರು ಕುರು ತಿಂಡಿ ಮಾಡಿ ಕೊಡುವುದರಲ್ಲಿ ಇರಬಹುದು ಹೀಗೆ ಎಲ್ಲದರಲ್ಲೂ ಮುಂದೇನೆ... ಎಲ್ಲರ ಅಮ್ಮನಂತೆ ನನ್ನಮ್ಮನು ಪೂಜೆಗೋ , ಮದುವೆಗೋ ಹೋಗಿ ಬರುವಾಗ  ಅಲ್ಲಿ ಊಟಕ್ಕೆ ಬಡಿಸಿದ  ಹೋಳಿಗೆಯನ್ನು ಎಡಕೈ ಯಲ್ಲಿ ತೆಗೆದುಕೊಂಡು ಕರವಸ್ತ್ರ ದಲ್ಲಿ ಕಟ್ಟಿ ತಿನ್ನಿಸಿದ್ದು, ಯಾರದ್ದೋ ದೂರು ಬಂದರೆ ಬಯ್ಯದೇ ಬುದ್ದಿ ಹೇಳಿದ್ದು, ಗಮ್ಮತ್ತಿನ ದಿನ ಎಲ್ಲವನ್ನೂ  ಬಡಿಸಿ ಕಡೆಗೆ ತಿಳಿಸಾರಿನಲ್ಲೇ ಊಟ ಮಾಡಿ ಕೈ ತೊಳೆದದ್ದು.. ಕಷ್ಟದ ದಿನಗಳಲ್ಲಿ ಇದ್ದುದನ್ನೆಲ್ಲ  ಬೇಯಿಸಿ ನಾನಾಗಲೇ ತಿಂದೆ ಹಸಿವಿಲ್ಲವೆಂದು ಏನೇನೊ ಸಬೂಬು ಹೇಳಿ ಖಾಲಿ ಹೊಟ್ಟೆಯಲ್ಲಿ ಮಲಗಿದ್ದು ಎಲ್ಲ ಅಮ್ಮ ಎಲ್ಲವನ್ನು ಒಡಲಲ್ಲಿ ಬಚ್ಚಿಟ್ಟು ಸಾಕಿದ ಸಾಕ್ಷಿಗಳು.
ಇಂದು  ನನ್ನ ನೋವಿಗೆ ತೇವಗೊಳ್ಳುತಿದ್ದ ಅಮ್ಮನ ಕಣ್ಣು ಸ್ವಲ್ಪ ಗುಂಡಿಯಲ್ಲಿವೆ  , ಮೊಗದಲ್ಲಿ ಭಾವನೆಯ ಗೆರೆಗಳು ದಣಿದ ನೆರಿಗೆಗಳಿವೆ, ಮಾತಿನ ಧ್ವನಿ ತೊದಳುತಿವೆ , ಮಗ ನನ್ನಿಂದ ಎತ್ತರ ಬೆಳೆದಿದ್ದನೆಂದೋ , ಶಾಲೆಗೆ ಹೋಗಿದನೆಂದೋ,  ಮಾತನ್ನು ಕೇಳುವುದಿಲ್ಲವೆಂದೋ , ಸ್ವಲ್ಪ ಹಿತ ನುಡಿಯು ಕಡಿಮೆಯಾಗಿದೆ ಅಷ್ಟೇ ... ಸೇರುಗಟ್ಟಲೆ ಪ್ರೀತಿ , ಬೊಗಸೆ ತುಂಬಾ ಮಮತೆ ಕೊಟ್ಟು ಭೌತಿಕ ಜೀವ ನೀಡಿ ,ಅಪ್ಪನಾಗಿ ಬುದ್ದಿ ಹೇಳುವ , ಅಜ್ಜಿಯಾಗಿ ಕಥೆ ಹೇಳುವ ನನ್ನಮ್ಮನಿಗೆ ಈ ಹಾಡು
ಅಮ್ಮ ನೀನು ನಮಗಾಗಿ
ಸಾವಿರ ವರುಷ ಸುಖವಾಗಿ
ಬಾಳಲೇ ಬೇಕು ಈ
ಮನೆ ಬೆಳಕಾಗಿ ....


Thursday, December 11, 2014

ಕನ್ನಡ - ಕನ್ನಡ

ಅ.. ಆ.. ಅ. ಆ..
ಇ.. ಈ.. ಇ.. ಈ..
ಅಆಇಈ ಕನ್ನಡದ ಅಕ್ಷರಮಾಲೆ
ಅ.... ಅಮ್ಮ ಎಂಬುವುದೇ ಕಂದನ ಕರುಳಿನ ಕರೆಯೋಲೆ
ಆ.... ಆಟ, ಊಟ, ಓಟ ಕನ್ನಡ ಒಂದನೇ ಪಾಠ
ಕನ್ನಡ ಭಾಷೆಯ ಕಲಿತವನ ಜೀವನವೇ ರಸದೂಟ...
ಇದು "ಕರುಳಿನ ಕರೆ" ಚಿತ್ರದ ಕನ್ನಡ ಭಾಷೆಯ ಬಗೆಗಿನ ಹೆಮ್ಮೆಯ ಹಾಡು, ಹೌದು ಜೀವಿಯೊಂದರ ಧ್ವನಿ ಪೆಟ್ಟಿಗೆಯಿಂದ ಉದ್ಭವಿಸಿದ ದನಿ ಗಾಳಿಯ ಒತ್ತಡಕ್ಕೆ ಸಿಳುಕಿ ಹಾರಾಡಿ ಅದು ತರಂಗಗಳಾಗಿ ತಮಟೆಗೆ ಬಡಿದು ಅನಾಥವಾದರೆ ಶಬ್ಧ, ಅದು ಅರ್ಥವಾದರೆ ಭಾಷೆಯಾಗುತ್ತದೆ. ಪ್ರತಿಯೊಬ್ಬರಿಗೂ ಭಾಷೆಯ ಬಗೆಗೆ ವಿಧ ವಿಧವಾದ ವ್ಯಾಖ್ಯಾನಗಳಿವೆ ಭಾಷೆ ಒಂದು ಸಂಸ್ಕಾರದ ಪರಿಶೋಧನೆಗೆ ಸಂಕೇತಗಳ ರೂಪ ನೀಡಿ ವ್ಯವಹರಿಸಲಿರುವ ವಿಶೇಷ ಸಾಮಥ್ರ್ಯ ಹಾಗೂ ಪಶು-ಪಕ್ಷಿಗಳಿಂದ ಪ್ರತ್ಯೇಕಿಸುವ ಘಟಕವೆಂದೆ ಬಿಂಬಿತವಾಗಿದೆ. ಭಾಷೆಯೆಂಬುದು ಆ ಪ್ರಾಂತ್ಯದ , ಜನ ಮಾನಸದ, ವ್ಯವಹಾರದ, ಸಮಾಜ ಸಂಸ್ಕ್ರತಿಯ ಸೊಗಡನ್ನು ಅಭಿವ್ಯಕ್ತಿ ಪಡಿಸುವ ರಾಯಭಾರಿಯಿದ್ದಂತೆ. ನಾವು ನಮ್ಮನ್ನು ಪರಿಚಯಿಸುವುದೇ ನಮ್ಮ ಭಾಷೆ, ನಮ್ಮ ನಾಡಿನ ಹೆಸರುಗಳ ಮೂಲಕ, ನಮ್ಮದು ಕನ್ನಡ ಭಾಷೆ ಅದರ ನವ್ಯತೆ, ನವಿರತೆ, ಮುಗ್ಧತೆ, ಸ್ಪಷ್ಟತೆ, ಉಚ್ಚರಣೆ, ಭಾವಾವಿಶೇಷಣಗಳು ಕನ್ನಡಿಗನೆನ್ನುವವನ ಮನ ಗೌರವವೆನಿಸುತ್ತದೆ.. ಅದಿ ದ್ರಾವಿಡ ಭಾಷೆಯಿಂದ ಕವಳೊಡೆದು ಒಸರಿನಂತೆ ಜಿನುಗಿ ಅದರ ಗಟ್ಟಿತನ , ಪ್ರಾಚೀನತೆ, ಸ್ವತಂತ್ರ ಪರಂಪರೆ, ಅಪಾರ ಸಾಹಿತ್ಯ ಬಿನ್ನತೆ, ಉನ್ನತ ಮಟ್ಟದ ಮೌಖಿಕ , ಶ್ರೇಷ್ಠ ಜಾನಪದ ನೆಲೆಯಲ್ಲಿ ಇಂದು ಕನ್ನಡ ಶಾಸ್ತ್ರೀಯ ಭಾಷೆಗಳಲ್ಲಿ ಒಂದಾಗಿದೆ. ಕನ್ನಡದ ಕುಲಪುರೋಹಿತ ಅಲೂರು ವೆಂಕಟರಾಯರು ಹೇಳುತ್ತಾ " ಭರತ ಖಂಡವಿಲ್ಲದೆ ಕರ್ನಾಟಕ ಮುಂತಾದ ಪ್ರಾಂತ್ಯಗಳು ಇಲ್ಲವೆಂಬುದು ಎಷ್ಟು ನಿಜವೋ, ಅಷ್ಟೇ ಕರ್ನಾಟಕ ಮುಂತಾದ ಪ್ರಾಂತ್ಯಗಳಿಲ್ಲದೆ ಭರತಖಂಡವಿಲ್ಲವೆಂಬುದೂ ನಿಜ !!!, ಭಾರತೀಯನಲ್ಲದವನು ಹೇಗೆ ನಿಜವಾದ ಕನ್ನಡಿಗನಾಗಲಾರನೋ ಹಾಗೆಯೇ ಕನ್ನಡಿಗನಲ್ಲದವನು ನಿಜವಾದ ಭಾರತೀಯನಾಗಲಾರನು ಕರ್ನಾಟಕವೂ ಕನ್ನಡಿಗನ ದೇಹವು, ಜೀವವು, ಪ್ರತಿಯೊಬ್ಬ ಜೀವನೂ ಹೇಗೆ ತನ್ನ ಜೀವದ ಮುಖಾಂತರವಾಗಿಯೇ ಪರಮಾತ್ಮನನ್ನು ಸಾಕ್ಷೀಕರಿಸಿಕೊಳ್ಳತಕ್ಕದೋ ಹಾಗೆ ಕರ್ನಾಟಕಸ್ಥರು ಕರ್ನಾಟಕದ ಮುಖಾಂತರವಾಗಿಯೇ ಭಾರತಾಂಬೆಯ ಸಾಕ್ಷಾತ್ಕಾರವನ್ನು ಮಾಡಿಕೊಳ್ಳತಕ್ಕದ್ದು ಅವರಿಗೆ ಅನ್ಯ ಮಾರ್ಗವಿಲ್ಲ. ಅನ್ಯ ಮಾರ್ಗದಿಂದ ಅವಳನ್ನು ಕಾಣಲೆತ್ನಿಸುವುದು ಆತ್ಮವಂಚನೆಯು ಅದು ಪರರ ಮುಖಾಂತರವಾಗಿ ಪರಮಾತ್ಮನನ್ನು ಕಾಣಲಿಚ್ಚಿಸುವಂತೆ ನಿರರ್ಥಕವು. ಭಾರತದ ಸೇವೆಯನ್ನು ಮಾಡಲು ಕರ್ನಾಟಕತ್ವವೇ ರಾಜಮಾರ್ಗ; ಕನ್ನಡೇತರರು ಹಾಗೆ ಮಾಡಲಾರರು ಎಂಬುವುದು ಸತ್ಯ"


ಇಂದು ನಮ್ಮ ಕನ್ನಡ ಭಾಷೆ ಒಣಗಿ ಎಳ್ಕೊಟೆಯಾಗ ಹೊರಟಂತಿದೆ, ನಮ್ಮ ಹುಟ್ಟು, ನುಡಿ, ಸ್ಪರ್ಶ, ಧನ್ಯತೆ, ಭಾವ, ಕಠೋರತೆ, ನಮ್ಮತನ, ಸಂಸ್ಕಾರ ರೂಪ ಕೊಟ್ಟು ನಮ್ಮನ್ನು ಸಮಾಜಕ್ಕೆ ಯಾವ ಭಾಷೆ ಪರಿಚಯಿಸಿತ್ತೋ ಅದೇ ನಮ್ಮ ಸ್ವಂತ ಭಾಷೆ ಪರಕೀಯವಾಗುತ್ತಿದೆ, ಹಿಂದುಳಿಯುತ್ತಿದೆ, ಭಾಷೆಯ ಬಗೆಗಿನ ನಿರುತ್ಸಾಹ , ಹೆಮ್ಮೆಯ ಕೊರತೆಯಿಂದ ಜೀವಂತಿಗೆ ಕಳಕೊಳ್ಳುತ್ತಿದೆ. ಬೆಳಿಗ್ಗೆ ಎದ್ದ ಕೂಡಲೇ ಗುಡ್ ಮಾರ್ನಿಂಗ್ ಮಲಗುವಾಗ ಗುಡ್ ನೈಟ್,....ಹುಟ್ಟುಹಬ್ಬ, ಹಬ್ಬ ಹರಿದಿನ ಹ್ಯಾಪಿ ಬತ್ ್ ಡೇ, ಹ್ಯಾಪಿ ಯಿಂದ ಘೀಳಿಡುವ ಜಡ ಶಬ್ಧಗಳು ಇನ್ನೂ ಉಳಿದಂತೆ ಸೂಪರ್, ಸ್ಮಟ್ ್, ವಾವ್, ನೈಸ್ ಹೀಗೆ ಉದ್ಗಾರಗಳು .... ಆ ಆರ್ಥವಾಗದ ಪದಗಳ ಬದಲಾಗಿ ಶುಭೋದಯ, ಸುಪ್ರಭಾತ, ನಲ್ಬೆಳಗು... ಹುಟ್ಟು ಹಬ್ಬದ ಶುಭಾಶಯಗಳು, ಜನುಮದಿನದ ಶುಭಾಶಯಗಳು ಹೊಸವರುಷದ ಶುಭಾಷಯಗಳು... ಚೆನ್ನಾಗಿದೆ, ಇಷ್ಟವಾಯಿತು, ಸುಂದರವಾಗಿದೆಯೆಂಬುದೆಂದು ಪರ್ಯಾಯವಾಗಿ ಬಳಸಬಹುದಲ್ಲವೇ!!! ಮೇಲೆ ಬಳಸಿದ ಅಂಗ್ಲ ಪದಗಳ ಬಳಕೆಯಿಂದ ಭಾಷಾ ಜ್ಞಾನ ಹೆಚ್ಚುತ್ತದೆಯೇ? ಶಬ್ಧ ಭಂಡಾರ ವೃದ್ಧಿಸುತ್ತದೆಯೇ? ವ್ಯಾಕರಣ ಉತ್ತಮಗೊಳ್ಳುತ್ತದೆಯೇ? ಅಥವಾ ಪದಗಳು ಮರೆಯುತ್ತವೆಯೆಂದು ಆಗೀಗ ನೆನಪಿಸುವ ಪರಿಯೇ? ಆ ಇಂಗ್ಲಿಷ್ ಭಾಷೆಗೆ ಅದರದೇ ಅದ ಗೋತ್ರದವರಿದ್ದಾರೆ, ಮಾತೃ ಭಾಷಿಗರಿದ್ದಾರೆ, ಬಳಸುವವರಿದ್ದಾರೆ, ಅವರು ಅದನ್ನು ಒತ್ತಡವಿಲ್ಲದೇ ಉಳಿಸುತ್ತಾರೆ, ನಾವು ಬೆಳೆಸುವ ಅಗತ್ಯವಿಲ್ಲ , ಅಳಿಯುವುದು ನಮ್ಮ ಭಾಷೆ ಮಾತ್ರ.

ಕರ್ನಾಟಕದಲ್ಲಿ ಕನ್ನಡವನೇಕೆ ಕಡ್ಡಾಯ ಮಾಡಬಾರದು? ಅರಬರಿಗೆ ಅರಬೀ ಕಡ್ಡಾಯ , ಪ್ರಾನ್ಸ್ ನಲ್ಲಿ ಪ್ರೆಂಚ್ ಕಡ್ಡಾಯ , ಜಪಾನಿನಲ್ಲಿ ಜಪಾನಿ ಕಡ್ಡಾಯ, ಚೀನಾದಲ್ಲಿ ಚೀನಿ ಕಡ್ಡಾಯ ಮಾತೃ ಭಾಷೆಯಲ್ಲೇ ಕಲಿತು ಬೆಳೆದ ಆ ರಾಷ್ಟ್ರಗಳಾವುವೂ ಅಭಿವೃದ್ಧಿಯಲ್ಲಿ ಹಿಂದುಳಿದಿಲ್ಲ. ಮಡಿ , ಮೈಲಿಗೆಯ ಪರಿಧಿಯ ಪೊರೆಯ ಕಳಚಿ ಬೆಳೆದಾಗ ಮಾತ್ರ ಭಾಷೆಯೊಂದು ಜೀವಂತವಾಗಿರಲು ಸಾಧ್ಯ, ಬೇರೆ ಭಾಷೆಗಳ ಶಬ್ಧಗಳನ್ನು ದತ್ತು ಪಡೆದು, ವಿಷಯಗಳನ್ನು ತರ್ಜುಮೆ ಮಾಡಿ ಭಾಷೆ ಚಲನಶೀಲವಾಗಬೇಕು ಚಲಿಸಬೇಕು. ನಮ್ಮ ಇಡ್ಲಿ - ಚಟ್ನಿಗಳು ಅಂಗ್ಲರು ಬಳಸುತಿಲ್ಲವೇ? ಅರಬ್ಬರಿಗೆ ಗೊತ್ತಿಲ್ಲವೇ?. ಚರಟಗಳ ಸೋಸಿ, ಜಿಗುಟು ಬಿಟ್ಟು ಭಾಷೆ ಸರಳವಾಗಿ, ಕೃತಿಮ ಕನ್ನಡದ ಬದಲು ಸಹಜ ಕನ್ನಡದ ಬಳಸಿದಾದರೆ ನಮ್ಮ ಕನ್ನಡ ಉತ್ತುಂಗದಲ್ಲಿ ಹಾರಾಡಲು ಸಾಧ್ಯ. ನಮ್ಮ ನೆರೆಯ ಕೇರಳಿಗನ್ನನ್ನೊಮ್ಮೆ ನೋಡಿ ಆತ ಜಪಾನಿನಲ್ಲಿರಲಿ, ಒಮಾನಿನಲ್ಲಿರಲಿ, ಜರ್ಮನಿಯಲ್ಲಿರಲಿ ಭಾರತೀಯನಲ್ಲೇ ಕೇರಳವನ್ನು ನೋಡುವ ತವಕ "ನಿಂಙ ಮಲಿಯಾಳಿಂಯೋ?" ಎಂದೇ ಮಾತಿಗೆ ಶುರುವಿಡುವುದು, ನಿಮಗೂ ಗೊತ್ತಿರಬಹುದು ಮಲಯಾಳ ಇಂದು ಅರಬ್ಬ್ ರಾಷ್ಟ್ರಗಳಲ್ಲಿ ದ್ವೀತಿಯ ಭಾಷೆಯ ಮಟ್ಟಿಗೆ ಬೆಳೆದು ನಿಂತಿದೆ. ಕಾರಣ ಕೇರಳಿಗರು ಕಾಂಚಾಲಿ ಬಿಟ್ಟು, ನಾಡಿನ, ಭಾಷೆಯ ಪ್ರೇಮದಿಂದ ದಿನ ಬಳಸಿರುವುದರಿಂದ ಮಾತ್ರ ಸಾಧ್ಯವಾಗಿದೆ.ಯಾಕೋ ವಾಸ್ತವದ ವಸ್ತುಸ್ಧಿತಿಗೆ ಮಂದಬುದ್ಧಿಯವರು ಸಹ ಅಂಗ್ಲ ಭಾಷೆ ಬರತ್ತದೆಯೆಂದರೆ ನೌಕರಿ ದೊರೆಯುತ್ತದೆಯೆಂಬ ಜಗದ ಅಮಿಥ್ಯ ಖಚಿತವಾಗಿರುವುದರಿಂದ ಅಂಗ್ಲದ ಜಕ್ಕೆಲಿಗೆ ಜಾರುತ್ತಿದ್ದಾರೆ, ನಿಜವಾಗಿಂಯೂ ನಿಜವಾದ ವಿದ್ವತ್ತು ಅಂಗ್ಲದಿಂದ ಬರುವುದೇ ಇಲ್ಲ, ಅವಕಾಶ ಕೊಡುವುದು ಇಲ್ಲ ಎಂಬುದು ಅಂಗ್ಲ ಮಾನಿಸಿಕ ಗುಲಾಮರಿಗೆ ಅರ್ಥವಾದ ಹಾಗಿಲ್ಲ. ಎಲ್ಲಿ ಅಗತ್ಯತೆ ಇದೆಯೋ ಅಲ್ಲಿ ಬಳಸಲೇಬೇಕು ನಮ್ಮನ್ನು ನಾವು ಪರಿಚಯಿಸಿಕೊಳ್ಳಬೇಕು, ಎಂದರೆ ಕನ್ನಡ ಯಾವುದೇ ಭಾಷೆಗಿಂತಲೂ ಕೀಳೆಂದಲ್ಲ, ಅದರೆ ನಮ್ಮ ಮಲಿನವಾಗಿರುವ ರಕ್ತಮಜ್ಜೆಗಳಲ್ಲಿ, ಮೆದುಳಿನ ನೆರಿಗೆಗಳಲ್ಲಿ ಲೀನವಾಗಿರುವ ಕೀಳರಿಮೆಗೆ ಔಷಧಿ ನೀಡಬೇಕಷ್ಟೇ, ನೀವು ಅಪ್ಪಟ ಕನ್ನಡದಲ್ಲಿ ಮಾತನಾಡಿದರೆ ನಗುವವರೆಷ್ಟು ಜನ, ಗೇಲಿ ಮಾಡುವವರೆಷ್ಟು ಜನ, ಇದು ನಮ್ಮಮ್ಮನನ್ನೇ ಹಾಸ್ಯ ಮಾಡಿದಂತಲ್ಲವೇ? ಸ್ವಲ್ಪ ಕನ್ನಡದ ಕನ್ನಡಕವನ್ನಿಟ್ಟು ಚಿಂತಿಸಿ , ಇಂದು ಸ್ಪುಟ ಕನ್ನಡ ತನ್ನತೆಯೊಂದಿಗೆ ನಲಿದಾಡುತ್ತದೆಯೆಂದರೆ ಅದು ಹಳ್ಳಿಯ ಜನರಿಂದ, ನಮ್ಮ ಯಕ್ಷಗಾನಗಳಿಂದ, ರಂಗಸಂಘಗಳಿಂದ, ಜಾನಪದರಿಂದ ಮಾತ್ರ.
ಕೊನೆಗೆ ಕನ್ನಡ ಕಸ್ತೂರಿಯೆಂದು ಮುಚ್ಚಿದ ಡಬ್ಬದಲ್ಲಿ ಮುಚ್ಚಿಡದೇ ಪರಿಮಳ ಪಸರಿಸಲು ಬಿಟ್ಟು ಬಿಡಿ, ಓದುತ್ತಿರುವ ನೀವು ಹೆಮ್ಮೆಯ ಕನ್ನಡದ ಕಂದ ಕಾಂಚಾಲಿ ಬಿಡಿ ತಾವು ಬಳಸುವ ಚರವಾಣಿ, ಗಣಕಯಂತ್ರಗಳಲ್ಲಿ ಕನ್ನಡ ತಂತ್ರಾಂಶ ಬಳಸಿ, ಬರೆಯುವ ಹೆಸರು,ವಿಳಾಸ, ಸಾಮಾನು ಚೀಟಿಗಳನ್ನು ಮುಗ್ಧ, ದುಂಡಾಗಿನ ಸುಂದರ ಕನ್ನಡ ಅಕ್ಷರಗಳಲ್ಲಿ ಬರೆಯಿರಿ. ಇದು ಕೋರಿಕೆಯಲ್ಲ ಕರ್ನಾಟಕದವನೆಂದು, ಕನ್ನಡದವನೆನ್ನುವ ನಿಮಗೆ ನಿಮ್ಮ ಪ್ರತಿಷ್ಠೆಯ ಪ್ರಶ್ನೆ, ಸ್ವಂತಕ್ಕಾಗಿ ಹೋರಾಡುವ ನಾವು ನಾನು, ನನ್ನದು , ನನ್ನ ಮನೆ, ನನ್ನ ಜಾಗ ಹೀಗೆ ಅಹಂನಿಂದ ಸ್ವಾರ್ಥಿಯಾದಂತೆ ನನ್ನ ಭಾಷೆಯ ಬಗೆಗೂ ಸ್ವಾರ್ಥಿಯಾಗೋಣ ಏನಂತೀರಿ.



Greetings from Mangalore: The Cradle of Banking Excellence

Hello from Mangalore! You've probably heard in quizzes that the cradle of banking is nothing but Dakshina Kannada or Mangaluru. Mangalor...